ಶ್ರೀನಗರ: ಇದೇ 26ರಂದು ಜಮ್ಮುವಿನ ಬಿಜ್ಬೆಹರಾ ಪ್ರದೇಶದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಯೋಧ ಮತ್ತು ಐದು ವರ್ಷದ ಮಗುವನ್ನು ಹತ್ಯೆ ಮಾಡಿದ್ದ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಕೇಂದ್ರಾಡಳಿತ ಪ್ರದೇಶದ ಅನಂತ್ನಾಗ್ ಜಿಲ್ಲೆಯ ವಾಘಾಮ ಬಿಜ್ಬೆಹರ್ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಉಗ್ರರು ಬಲಿಯಾಗಿದ್ದಾರೆ ಎಂದು ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದಿಲ್ಬಾಲ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಜ್ಬುಲ್ ಉಗ್ರರ ಹತ್ಯೆ: ಜಮ್ಮುವಿನ ದೋಡಾ ಈಗ ಭಯೋತ್ಪಾದನಾ ಮುಕ್ತ ಜಿಲ್ಲೆ…
26ರ ಮಧ್ಯಾಹ್ನದ ವೇಳೆ ಪಾಡ್ಶಾಹಿ ಬಾಗ್ ಸೇತುವೆ ಬಳಿ ರಸ್ತೆಯ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಸಿಆರ್ಪಿಎಫ್ ಯೋಧರನ್ನು ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಅದರಲ್ಲಿ 90 ಬಿಟಾಲಿಯನ್ ಪಡೆಯ ಸಿಆರ್ಪಿಎಫ್ ಯೋಧ ಹಾಗೂ ಮಗು ಬಲಿಯಾಗಿದ್ದರು.
ಈ ಘಟನೆ ನಡೆದಂದಿನಿಂದಲೂ ಉಗ್ರರಿಗಾಗಿ ಭಾರತೀಯ ಯೋಧರು ಕಾರ್ಯಾಚರಣೆ ನಡೆಸುತ್ತಲೇ ಇದ್ದರು. ಉಗ್ರರು ವಾಘಾಮಾ ಎಂಬ ಪ್ರದೇಶದಲ್ಲಿ ಅಡಗಿ ಕುಳಿತಿರುವ ಮಾಹಿತಿ ತಿಳಿದುಬರುತ್ತಿದ್ದಂತೆಯೇ ಯೋಧರು ಸ್ಥಳವನ್ನು ಸುತ್ತುವರೆದು ಎನ್’ಕೌಂಟರ್ ನಡೆಸಿದ್ದು, ಇಬ್ಬರನ್ನೂ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಿಂಗ್ ವಿವರಿಸಿದ್ದಾರೆ. (ಏಜೆನ್ಸೀಸ್)