ಜಮಖಂಡಿ: ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಎಲ್ಲ ಸಾರ್ವಜನಿಕರಿಗೂ ಏಕಕಾಲಕ್ಕೆ ಲಸಿಕೆ ವಿತರಣೆ ಮಾಡಲು ಅಧಿಕಾರಿಗಳಿಗೆ ವಿನಂತಿಸಿದರೂ ಜಾರಿಯಾಗುತ್ತಿಲ್ಲ, ಇದರಲ್ಲಿ ಕೆಲವರು ರಾಜಕೀಯ ಮಾಡುತ್ತಿರುವುದು ದೌರ್ಭಾಗ್ಯ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಕಿಡಿಕಾರಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಕರೊನಾದಂಥ ಮಹಾಮಾರಿಗೆ ಕೇಂದ್ರ ಸರ್ಕಾರ ಲಕ್ಷಾಂತರ ಕೋಟಿ ರೂ.ಖರ್ಚು ಮಾಡಿ ಉಚಿತವಾಗಿ ಲಸಿಕೆ ನೀಡುತ್ತಿದೆ. ಈ ಯೋಜನೆಗೆ ಯಾವ ರಾಜಕಾರಣಿಯ ಮನೆಯಿಂದಲು ಹಣ ಬರುವುದಿಲ್ಲ. ಆದರೆ, ಜಮಖಂಡಿಯ ಅಧಿಕಾರಿಗಳು ಜೂ.12 ರಂದು ಹಿರೇಪಡಸಲಗಿ ಗ್ರಾಪಂಗೆ ಬಂದು ಜೂ.14 ರಂದು ಲಸಿಕೆ ಹಾಕುವುದಾಗಿ ಹೇಳಿ ಜನಜಾಗೃತಿ ಮಾಡಲು ಹೇಳಿ ಅಂದು ಅಧಿಕಾರಿಗಳು ಬರದೆ ಇರುವುದಕ್ಕೆ ಕಾರಣ ತಿಳಿಸಬೇಕು. ಸ್ಥಳೀಯ ಶಾಸಕರು ಅಂದು ಬೆಂಗಳೂರಿನಲ್ಲಿ ಇರುವುದರಿಂದ ಮುಂದೂಡಿದ್ದಿರಾ? ಐದು ನೂರು ಜನರಿಗೆ ಆಗುವಷ್ಟು ಲಸಿಕೆ ಇದ್ದರೂ ಗ್ರಾಮಸ್ಥರಿಗೆ ಲಸಿಕೆ ಏಕೆ ನೀಡಲಿಲ್ಲ. ಅದಕ್ಕೆ ಯಾರು ಜವಾಬ್ದಾರರು? ಎಂದು ಪ್ರಶ್ನಿಸಿದ್ದಾರೆ.
ಆಡಳಿತ ಯಂತ್ರ ರಾಜಕಾರಣಿಗಳ ಕೈಗೊಂಬೆಯಾಗಬಾರದು. ಜಿಲ್ಲಾಧಿಕಾರಿಗಳು ಸಾರ್ವಜನಿಕರ ಆರೋಗ್ಯದ ಹಿತಕಾಪಾಡುವಲ್ಲಿ ಎಡುವಬಾರದು ಎಂದು ತಿಳಿಸಿದ್ದಾರೆ.