ಶಿರಸಿ: ಇಲ್ಲಿಯ ಗಣೇಶನಗರದ ಅಂಗನವಾಡಿಯಲ್ಲಿ ಗೌರಿ ನಾಯ್ಕ ಅವರು ತೋಡುತ್ತಿರುವ ಬಾವಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (ಡಬ್ಲ್ಯುಸಿಡಬ್ಲ್ಯುಡಿ) ಜಿಲ್ಲಾ ಉಪನಿರ್ದೇಶಕಿ ಡಾ. ಹುಲಿಗೆಮ್ಮ, ತಹಸೀಲ್ದಾರ್ ಶ್ರೀಧರ ಮುಂದಲಮನಿ ಮಂಗಳವಾರ ಪರಿಶೀಲಿಸಿದರು.
ಬಳಿಕ ಸ್ಥಳೀಯರೊಂದಿಗೆ ಮಾತನಾಡಿದ ಡಾ. ಹುಲಿಗೆಮ್ಮ, ಅಂಗನ ವಾಡಿಗೆ ಈಗಾಗಲೇ ನಳದ ಮೂಲಕ ಪೂರೈಕೆಯಾಗುತ್ತಿರುವ ನೀರೂ ಸಹ ಬಳಸಲು ಯೋಗ್ಯವಾಗಿದೆ. ಗೌರಿ ನಾಯ್ಕ ಅವರಿಗೆ ಬಾವಿ ತೋಡುವಿಕೆ ಸ್ಥಗಿತಗೊಳಿಸಲು ನಾವು ಹೇಳಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಸುರಕ್ಷತೆ ವಹಿಸಲು ಸೂಚಿಸಿದ್ದೇವೆ. ಇಲ್ಲಿಯ ಸ್ಥಿತಿಯ ಬಗ್ಗೆ ವರದಿಯನ್ನು ಇಲಾಖೆಯ ಮುಖ್ಯಸ್ಥರಿಗೆ ಮತ್ತು ಜಿಪಂ ಸಿಇಒಗೆ ಸಲ್ಲಿಕೆ ಮಾಡಲಿದ್ದೇನೆ. ಅವರೊಂದಿಗೆ ರ್ಚಚಿಸಿದ ಬಳಿಕ ಅಂತಿಮ ನಿರ್ಣಯ ತಿಳಿಸುತ್ತೇವೆ. ಬಾವಿ ತೋಡಲು ಇಲಾಖೆಯ ಮುಖ್ಯಸ್ಥರು ನೀಡುವ ಅನುಮತಿಯನ್ನೂ ಅಧಿಕೃತವಾಗಿ ನೀಡುತ್ತೇವೆ ಎಂದರು.
ಗೌರಿ ನಾಯ್ಕ ಅವರ ಕೆಲಸಕ್ಕೆ ನಾವು ವಿರೋಧ ವ್ಯಕ್ತಪಡಿಸಿಲ್ಲ. ಈ ಹಿಂದೆ ಗೌರಿ ನಾಯ್ಕ ಅವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಿಂದಲೂ ಸನ್ಮಾನಿಸಿದ್ದು, ಅವರ ಕೆಲಸ ಕಾರ್ಯಗಳ ಬಗ್ಗೆ ಇಲಾಖೆಗೆ ತಿಳಿದಿದೆ. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂಬುದು ನಮ್ಮ ಆಶಯ ಎಂದರು. ಸ್ಥಳದಲ್ಲಿ ಉಪಸ್ಥಿತರಿದ್ದ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಅಂಗನವಾಡಿಗೆ ಸೂಕ್ತ ಕಾಂಪೌಂಡ್, ಬಾವಿಗೆ ಭದ್ರತಾ ಗೋಡೆಯನ್ನು ನಾನೇ ಸ್ವತಃ ನಿರ್ವಿುಸಿಕೊಡುತ್ತೇನೆ. ಆದರೆ, ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಒಪ್ಪಿಗೆ ಪತ್ರ ನೀಡಲಿ ಎಂದು ಆಗ್ರಹಿಸಿದರು.
ಸ್ಥಳೀಯರಾದ ಶೋಭಾ ನಾಯ್ಕ, ವೆಂಕಟೇಶ ನಾಯ್ಕ, ವೀರೇಶ ಬೋವಿವಡ್ಡರ, ಹನುಮಂತ ಬೋವಿವಡ್ಡರ, ನಾಗರಾಜ ಮುಕ್ರಿ ಇತರರಿದ್ದರು.