ಸಾಗರ: ತಾಲೂಕಿನ ಮಡಸೂರು ಗ್ರಾಮದ 7 ರೈತರ ಮೇಲೆ ಕೊಲೆ ಯತ್ನ ಸೇರಿದಂತೆ ವಿವಿಧ ಪ್ರಕರಣ ದಾಖಲಿಸಿ, ಬಂಧಿಸಿರುವುದನ್ನು ಖಂಡಿಸಿ ರೈತ ಸಂಘ (ಡಾ. ಎಚ್.ಗಣಪತಿಯಪ್ಪ ಬಣ)ದಿಂದ ಸೋಮವಾರ ಜೈಲ್ಭರೋ ಚಳವಳಿ ನಡೆಸಿದರು.
ಇದಕ್ಕೂ ಮೊದಲು ಪೊಲೀಸ್ ಸ್ಟೇಷನ್ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾನಿರತರು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸೊರಬ ರಸ್ತೆಯಲ್ಲಿ ರಸ್ತೆತಡೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಅಮಾಯಕ ರೈತರನ್ನು 15 ದಿನಗಳಿಂದ ಮಾಡದ ತಪ್ಪಿಗೆ ಜೈಲಿನಲ್ಲಿ ಇರಿಸಿರುವ ಕ್ರಮ ಖಂಡನೀಯ. ಘಟನೆ ಬಗ್ಗೆ ಯಾವುದೇ ಪಕ್ಷದ ಮುಖಂಡರು ಸರಿಯಾಗಿ ಸ್ಪಂದಿಸುತ್ತಿಲ್ಲ. ಮಾಜಿ ಶಾಸಕರು ನೆಪಮಾತ್ರಕ್ಕೆ ಹೇಳಿಕೆ ನೀಡಿದ್ದರೆ, ಹಾಲಿ ಶಾಸಕರು ಘಟನೆ ಕುರಿತು ಯಾವುದೇ ಹೇಳಿಕೆ ನೀಡದೆ ಇರುವುದು ಜನಪ್ರತಿನಿಧಿಗಳಿಗೆ ರೈತರ ಮೇಲೆ ಇರುವ ಕಾಳಜಿಯನ್ನು ತೋರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಕೊಲೆ ಯತ್ನ ಮಾಡಿದರು ಎಂದು ತಹಸೀಲ್ದಾರ್ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ಕಳೆದ ಐದು ದಶಕಗಳಿಂದ ರೈತರು ದರಖಾಸ್ತಿನಡಿ ಮಂಜೂರಾದ ಜಮೀನಿಗೆ ಸಾಗುವಳಿ ಪತ್ರ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲ ತಹಸೀಲ್ದಾರರು ರೈತರನ್ನು ಸತಾಯಿಸುತ್ತಲೇ ಬಂದಿದ್ದಾರೆ. ಈಗಿನ ತಹಸೀಲ್ದಾರರು ಸ್ಥಳಕ್ಕೆ ಅಧಿಕಾರಿಗಳ ಜತೆ ಹೋಗಿ ರೈತರ ಮೇಲೆ ಸುಳ್ಳು ಕೇಸ್ ಹಾಕಿಸಿದ್ದಾರೆ. ಸುಳ್ಳು ಕೇಸ್ ಹಾಕಿಸಿರುವ ತಹಸೀಲ್ದಾರ್ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು. ರಾಜ್ಯ ಸರ್ಕಾರ ರೈತರ ಮೇಲಿನ ಸುಳ್ಳು ಕೇಸನ್ನು ರದ್ದುಪಡಿಸಬೇಕು. ಇಲ್ಲವಾದಲ್ಲಿ ರೈತ ಸಂಘ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ರಮೇಶ್ ಈ. ಕೆಳದಿ, ತಾಲೂಕು ಅಧ್ಯಕ್ಷ ಡಾ. ರಾಮಚಂದ್ರ ಮನೆಘಟ್ಟ, ಹೊಯ್ಸಳ ಗಣಪತಿಯಪ್ಪ, ಭದ್ರೇಶ್ ಬಾಳಗೋಡು, ಕುಮಾರ ಗೌಡ, ಕೃಷ್ಣಮೂರ್ತಿ, ರವಿ ಕುಗ್ವೆ, ಚಂದ್ರು ಪೂಜಾರಿ, ಚಂದ್ರು ಆಲಳ್ಳಿ, ಜವರೇಗೌಡ ಇತರರಿದ್ದರು.