ಯಲಹಂಕ: ಆದಿಚುಂಚನಗಿರಿ ಮಠಕ್ಕೆ ಯಲಹಂಕ ಕ್ಷೇತ್ರದ ಭಕ್ತಾದಿಗಳು ತಾವು ಸಂಗ್ರಹಿಸಿದ 176 ಮೂಟೆ ರಾಗಿ, ದವಸ ಧಾನ್ಯವನ್ನು ಕಳುಹಿಸಿಕೊಟ್ಟಿದ್ದಾರೆ.
ಹೇಸರಘಟ್ಟ ಹೋಬಳಿಯ ಅರಕೆರೆ ಮತ್ತು ಸೊಣ್ಣೇನಹಳ್ಳಿ ಗ್ರಾಮ ಪಂಚಾಯಿತಿಯ ಸುಮಾರು 20 ಗ್ರಾಮಸ್ಥರಿಂದ ಚಲ್ಲಹಳ್ಳಿ ಗ್ರಾಮದ ದೇವಸ್ಥಾನದಲ್ಲಿ ದವಸ ಧಾನ್ಯ ಸಂಗ್ರಹಿಸಲಾಗಿದೆ. ರಾಗಿ, ಅಕ್ಕಿ, ಹುಣಸೆಹಣ್ಣು, ಕುಂಬಳಕಾಯಿ, ಕಾಳುಕಡಿ, ತರಕಾರಿಗಳನ್ನು ಸಂಗ್ರಹಿಸಿದ್ದು, ಅದನ್ನು ಲಾರಿಗೆ ತುಂಬಿ ಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಕಳುಹಿಸಿಕೊಡಲಾಗಿದೆ.
ಪ್ರತಿವರ್ಷ ಶ್ರೀಮಠದ ಭಕ್ತರು ಮನೆ ಮನೆಗಳಿಗೆ ತೆರಳಿ ಅವರಿಂದ ದವಸಧಾನ್ಯಗಳನ್ನು ಭಿಕ್ಷೆ ಬೇಡಿ ಜೋಳಿಗೆ ತುಂಬಿಸಿಕೊಂಡು ಅದನ್ನು ಆದಿಚುಂಚನಗಿರಿ ಮಠಕ್ಕೆ ಕಳುಹಿಸಿಕೊಡುತ್ತಾರೆ. ಅದರಂತೆ ಈ ವರ್ಷವೂ ದವಸ ಧಾನ್ಯ ಕಳುಹಿಸಿಕೊಟ್ಟಿದ್ದಾಗಿ ಮಠದ ಭಕ್ತ ಕಡತನಮಲೆ ಸತೀಶ್ ಹೇಳಿದ್ದಾರೆ.