ನಾಗಮಂಗಲ: ಆದಿಚುಂಚನಗಿರಿ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಒಕ್ಕಲಿಗರ ವಧು-ವರರ ಸಮಾವೇಶದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಅಕ್ಷರಶಃ ಜಾತ್ರೆಯಂತೆ ಕಂಡುಬಂತು. ವಧುಗಳಿಗಿಂತ ವರರ ಸಂಖ್ಯೆಯೇ ಹೆಚ್ಚಾಗಿತ್ತು. ವಧು-ವರರ ಸಮಾವೇಶದಲ್ಲಿ ರೈತ ಸಮೂಹದ ಹುಡುಗರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡದ್ದು ವಿಶೇಷವಾಗಿತ್ತು. ವಧುಗಳ ನೋಂದಣಿ ಸಂಖ್ಯೆ ಕೇವಲ 250.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ವಾರಕ್ಕೂ ಮೊದಲಿನಿಂದಲೇ ಸುಮಾರು 13 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ವಧು-ವರರು ನೋಂದಣಿ ಮಾಡಿಸಿದ್ದರು. ಈ ಪೈಕಿ ವಧು ನೋಂದಣಿ ಸಂಖ್ಯೆ ಕೇವಲ 250. ತಮ್ಮ ಪಾಲಕರ ಜತೆಗೂಡಿ ವಧು-ವರರು ಆಗಮಿಸಿದ್ದರಿಂದ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಆದಿಚುಂಚನಗಿರಿ ಮಠದ ಆವರಣದಲ್ಲಿರುವ ಬಿಜಿಎಸ್ ಸಭಾಮಂಟಪದಲ್ಲಿ ಭಾನುವಾರ ಬೆಳಗ್ಗೆ 9.30ಕ್ಕೆ ಆರಂಭವಾದ ಸಮಾವೇಶ ಮಧ್ಯಾಹ್ನ 2 ಗಂಟೆವರೆಗೆ ನಡೆಯಿತು. ಈ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿದ್ದ ವರರು ವೇದಿಕೆ ಮೇಲೆ ನಿಂತು ತಮ್ಮ ಸ್ವವಿವರಗಳನ್ನು ತಿಳಿಸಿದರು. ಸ್ವವಿವರ ತಿಳಿಸಲು ಸಾಲಿನಲ್ಲಿ ನಿಂತು ಸಾಗುತ್ತಿದ್ದರಿಂದ ನೂಕುನುಗ್ಗಲು ಉಂಟಾಯಿತು. ಬಿಜಿಎಸ್ ಸಭಾಂಗಣದಲ್ಲಿ ಕೆಲವು ಪಾಲಕರು ನೂಕುನುಗ್ಗಲಿನಲ್ಲಿ ಆಯತಪ್ಪಿ ಕೆಳಗೆಬಿದ್ದು ಅಸ್ವಸ್ಥರಾದರು. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದು ಕೂಡ ಕಂಡುಬಂತು.
ವಧುಗಳಿಗಿಂತ ವರರ ಸಂಖ್ಯೆಯ ಹೆಚ್ಚಾಗಿದ್ದರಿಂದ ವಧುಗಳ ಪಾಲಕರು ಸಮಾವೇಶದ ವೇದಿಕೆ ಹತ್ತಲು ಕೂಡ ಹಿಂದೇಟು ಹಾಕಿದರು. ವಧು-ವರರ ಸಮಾವೇಶದಲ್ಲಿ ರೈತ ಸಮೂಹದ ಹುಡುಗರು ಹೆಚ್ಚಾಗಿದ್ದು ವಿಶೇಷವಾಗಿತ್ತು. ಸಮಾವೇಶದಲ್ಲಿ ಪಾಲ್ಗೊಳ್ಳುವವರಿಗೆ ಭಾನುವಾರ ಬೆಳ್ಳೂರು ಕ್ರಾಸ್ನಿಂದ ಆದಿಚುಂಚನಗಿರಿವರೆಗೆ ಉಚಿತ ವಾಹನಗಳ ವ್ಯವಸ್ಥೆ ಮಾಡಲಾಗಿತ್ತು.
ಸಮಾವೇಶದಲ್ಲಿ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಸಮಾವೇಶಕ್ಕೆ ಇಷ್ಟೊಂದು ದೊಡ್ಡಮಟ್ಟದ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ನಿರೀಕ್ಷೆಯಿರಲಿಲ್ಲ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಒಕ್ಕಲಿಗರ ವಧು-ವರರ ಸಮಾವೇಶವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗುವುದು ಎಂದರು.
ವಧು-ವರರ ಸಮಾವೇಶವನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. ಒಕ್ಕಲಿಗ ಸಮುದಾಯಕ್ಕೆ ಧಕ್ಕೆ ಬರುವಂತಹ ಸಂದರ್ಭದಲ್ಲಿ ಹಾಗೂ ಮೀಸಲಾತಿ ವಿಚಾರದಲ್ಲಿ ಅನ್ಯಾಯವಾದರೆ ಗ್ರಾಮೀಣ ಪ್ರದೇಶದಲ್ಲಿರುವ ಸಮುದಾಯದ ಪ್ರತಿಯೊಬ್ಬರೂ ಹೋರಾಟಕ್ಕೆ ಆಗಮಿಸಬೇಕು ಎಂದು ನಿರ್ಮಲಾನಂದನಾಥ ಶ್ರೀಗಳು ಕರೆ ನೀಡಿದರು.
ಸಾಲುಗಟ್ಟಿ ನಿಂತ ವಾಹನಗಳು: ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ನಾಗಮಂಗಲ ತಾಲೂಕಿನ ಅಂಬಲಜೀರಹಳ್ಳಿ ಗ್ರಾಮದಿಂದ ಆದಿಚುಂಚನಗಿರಿ ಮಠದವರೆಗೆ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿ.ಮೀ.ಗಟ್ಟಲೆ ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಸಮಾವೇಶ ಮುಗಿದ ನಂತರವೂ ಟ್ರಾಫಿಕ್ ಜಾಮ್ ಉಂಟಾಯಿತು.