ಜಗಳೂರು: ಜಗಳೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆಯಾಗಿ ಸಿ.ವಿಶಾಲಾಕ್ಷಿ, ಉಪಾಧ್ಯಕ್ಷೆಯಾಗಿ ನಿರ್ಮಲಕುಮಾರಿ ಅವಿರೋಧ ಆಯ್ಕೆಯಾಗಿದ್ದಾರೆ.
ಪಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿ ಆಗಿದ್ದ ತಹಸೀಲ್ದಾರ್ ಸಂತೋಷ್ ಕುಮಾರ್ ಪರಿಶೀಲನೆ ನಡೆಸಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಿಸಿದರು.
ಒಟ್ಟು 18 ಸದಸ್ಯ ಬಲದ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಈ ಹಿಂದೆ ಅಧ್ಯಕ್ಷೆಯಾಗಿದ್ದ ಎಸ್.ಸಿದ್ದಪ್ಪ, ಉಪಾಧ್ಯಕ್ಷೆ ಬಿ.ಮಂಜಮ್ಮ ರಾಜೀನಾಮೆ ನೀಡಿದ್ದರಿಂದೆರಡೂ ಹುದ್ದೆಗೆ ಹೊಸಬರ ಆಯ್ಕೆ ನಡೆಯಿತು.
ಈ ವೇಳೆ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ಪಕ್ಷಭೇದ ಮರೆತು ಕೆಲಸ ಮಾಡಬೇಕು. ಮನೆ ಕಳೆದುಕೊಂಡ 90 ನಿರಾಶ್ರಿತರಿಗೆ ಶೀಘ್ರವೇ ನಿವೇಶನ ವಿತರಿಸಲಾಗುವುದು. ನಿವೇಶನ ರಹಿತರಿಗೂ ಜಮೀನು ಖರೀದಿ ಮಾಡಿ ಸೈಟ್ ನೀಡಲು ಚಿಂತನೆ ನಡೆಸಲಾಗಿದೆ. ಆದರೆ ಜಮೀನು ಎಕರೆಗೆ 50 ಲಕ್ಷ ದುಬಾರಿ ಬೆಲೆ ಹೇಳುತ್ತಿದ್ದಾರೆ ಎಂದರು.
ಅನುದಾನದ ಕೊರತೆ ಇದ್ದು, ಕೂಡಲೇ ಪಪಂ ಅಧ್ಯಕ್ಷರ ನಿಯೋಗದೊಂದಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಅಭಿವೃದ್ಧಿಗೆ ಒತ್ತು ನೀಡಲು ಮನವಿ ಸಲ್ಲಿಸಲಾಗುವುದು ಎಂದರು.