More

    ಬೆಳೆಗೆ ವೈಜ್ಞಾನಿಕ ಬೆಲೆ ಸಿಕ್ಕರೆ ಸಂಕಷ್ಟ ದೂರ

    ಜಗಳೂರು: ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಕ್ಕಾಗ ಮಾತ್ರ ರೈತರ ಬದುಕಿನ ಸಂಕಷ್ಟ ದೂರವಾಗಲು ಸಾಧ್ಯ ಎಂದು ರೈತ ಸಂಘ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಹೇಳಿದರು.

    ತಾಲೂಕಿನ ತಾಯಿಟೋಣಿ ಗ್ರಾಮದಲ್ಲಿ ಗುರುವಾರ ರಾಜ್ಯ ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಹಮ್ಮಿಕೊಂಡಿದ್ದ ಗ್ರಾಮ ಘಟಕ ಉದ್ಘಾಟಿಸಿ ಮಾತನಾಡಿದರು.

    ರೈತರು ಬೆಳೆದ ಬೆಳೆಗೆ ವರ್ಷದಿಂದ ವರ್ಷಕ್ಕೆ ಬೆಲೆ ಕಡಿಮೆಯಾಗುತ್ತಿದೆ. ಆದರೆ, ನೌಕರರಿಗೆ ಮಾತ್ರ ವೇತನ ದ್ವಿಗುಣವಾಗುತ್ತಿದೆ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

    ನಿಜವಾಗಿಯೂ ಸರ್ಕಾರ ಮೊದಲು ರೈತರಿಗೆ ನೆರವು ನೀಡಬೇಕು. ಒಮ್ಮೆ ರೈತ ಭೂಮಿಗೆ ಬಿತ್ತನೆ ಮಾಡಿ ಬೆಳೆ ತೆಗೆಯದಿದ್ದರೆ ಮನುಷ್ಯ ಸೇರಿದಂತೆ ಪ್ರಾಣಿ ಪಕ್ಷಿಗಳ ಸಂಕುಲವೇ ಆಹಾರವಿಲ್ಲದೆ ನಾಶವಾಗುತ್ತದೆ. ಇದನ್ನು ನಮ್ಮನ್ನಾಳುವ ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದರು.

    ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಂ. ಹೊಳೆ ಚಿರಂಜೀವಿ ಮಾತನಾಡಿ, ರೈತರ ಬಗ್ಗೆ ಯಾರಿಗೂ ಕಾಳಜಿ ಇಲ್ಲ. ಯಾವ ಸರ್ಕಾರಗಳು ರೈತರನ್ನು ಉದ್ಧಾರ ಮಾಡುತ್ತಿಲ್ಲ. ಬಿತ್ತನೆಬೀಜ, ಗೊಬ್ಬರ ವಿದ್ಯುತ್ ನೀಡುವಲ್ಲಿ ಸಹ ಸರ್ಕಾರ ವಿಫಲವಾಗಿವೆ. ಎಲ್ಲ ಸೌಲಭ್ಯ ಕಲ್ಪಿಸಿದರೆ ನಗರ ಪ್ರದೇಶಗಳಿಗೆ ವಲಸೆ ಹೋಗುವ ರೈತರನ್ನು ತಪ್ಪಿಸಬಹುದು ಎಂದು ತಿಳಿಸಿದರು. ರೈತರು ವ್ಯವಸಾಯದ ಮೇಲೆ ತೆಗೆದುಕೊಂಡ ಎಲ್ಲ ಸಾಲ ಮನ್ನಾ ಮಾಡಬೇಕು, ಬೆಳೆಗೆ ಬೆಂಬಲ ಬೆಲೆ ನೀಡಬೇಕು ಎಂದರು.

    ಪ್ರಗತಿಪರ ಹೋರಾಟಗಾರ ಎಚ್.ಎಂ. ಹೊಳೆ ಮಹಾಲಿಂಗಪ್ಪ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ರೈತರ ಸಮಸ್ಯೆ ಪರಿಹರಿಸಲು ಯಾವ ಸರ್ಕಾರಗಳಿಂದಲೂ ಸಾಧ್ಯವಾಗಿಲ್ಲ. ವಿದ್ಯಾವಂತರು ಸೇರಿ ಗ್ರಾಮೀಣರ ವಲಸೆ ಹೆಚ್ಚಿದ್ದು, 2025ಕ್ಕೆ 53 ಕೋಟಿಯಷ್ಟು ಜನರು ನಗರ ಸೇರಲಿದ್ದಾರೆ. ಸರ್ಕಾರಗಳು ಈ ಬಗ್ಗೆ ಗಮನಹರಿಸಬೇಕಿದೆ. ಇಲ್ಲದಿದ್ದರೆ ಆಹಾರ ಉತ್ಪಾದನೆ ಸೇರಿದಂತೆ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ರೈತ ಸಂಘದ ನಗರ ಘಟಕದ ಅಧ್ಯಕ್ಷ ಬೈರನಾಯಕನಹಳ್ಳಿ ರಾಜು, ರೈತ ಮುಖಂಡರಾದ ಕಾನನಕಟ್ಟೆ ತಿಪ್ಪೇಸ್ವಾಮಿ, ಹೊನ್ನೂರು ಅಲಿ, ದಿಬ್ಬದಹಳ್ಳಿ ಗಂಗಾಧರಪ್ಪ, ಮಹಾದೇವರೆಡ್ಡಿ, ಸಣ್ಣಪಾಲಜ್ಜ, ಅರವಿಂದ್ ಪಾಟೀಲ್, ಪರಸಪ್ಪ ಮಡ್ರಳ್ಳಿ, ಚಿಕ್ಕ ಉಜ್ಜಯಿನಿ ಸುಪುತ್ರ, ಕಲ್ಲೇದೇವರಪುರ ಮೇಘನಾಥ್, ಅಂಜಿನಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts