ಜಗಳೂರು: ಇಲ್ಲಿನ ತಾಲೂಕು ಕಚೇರಿ ಕಡತಗಳ ಕೋಣೆಯ ಕಿಟಕಿ ಗಾಜುಗಳನ್ನು ಒಡೆದ ಕಳ್ಳರು ಕೈಗೆ ಸಿಕ್ಕ ದಾಖಲೆ ದೋಚಿ ಪರಾರಿಯಾಗಿದ್ದಾರೆ.
ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ಕಾರಣ ಎರಡು ದಿನ ಕಚೇರಿ ಬಂದ್ ಆಗಿತ್ತು. ಈ ವೇಳೆ ಚೋರರು ಕಡತಗಳಿರುವ ಕೋಣೆಯ ಎರಡು ಕಿಟಕಿಗಳ ಗಾಜು ಒಡೆದು ಕೈಗೆ ಸಿಕ್ಕ ದಾಖಲೆ ಕದ್ದು ಪರಾರಿಯಾಗಿದ್ದಾರೆ.
ದಾಖಲೆ ಕೋಣೆಯಲ್ಲಿ ನೂರಾರು ವರ್ಷಗಳ ಪಹಣಿ, ಇಸಿ ಇನ್ನಿತರ ಕಚೇರಿಯ ಹಳೆ ದಾಖಲೆ ಸಂಗ್ರಹಿಸಲಾಗಿತ್ತು. ರಜೆ ಮುಗಿಸಿ ಸೋಮವಾರ ಕಚೇರಿ ಬಾಗಿಲು ತೆರೆದು ನೋಡಿದಾಗ ದಾಖಲೆ ಕಳವಾಗಿರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿದ ಸಿಪಿಐ ದುರುಗಪ್ಪ, ಪಿಎಸ್ಐ ಉಮೇಶ್ಬಾಬು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.