ರಾಯಬಾಗ: ತಾಲೂಕಿನ ಇಟ್ನಾಳ ಗ್ರಾಮದ ಹಾಲಹಳ್ಳಿ ತೋಟದ ದೇವಸ್ಥಾನವೊಂದರಲ್ಲಿ ನವಜಾತ ಶಿಶುವೊಂದನ್ನು ಚೀಲದಲ್ಲಿ ಹಾಕಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಗುರುವಾರ ನಡೆದಿದೆ.
ಸ್ಥಳೀಯರು ಬೆಳಗಿನ ಜಾವ ದೇವಸ್ಥಾನಕ್ಕೆ ಹೋಗಿದ್ದ ವೇಳೆ ಗಂಡು ಮಗು ಇರುವುದು ಕಂಡು ಬಂದಿದೆ. ಬಳಿಕ ಜನರು ಮುಗಳಖೋಡ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗೆ ಮತ್ತು ಆಶಾ ಕಾರ್ಯಕರ್ತೆಗೆ ಮಾಹಿತಿ ನೀಡಿದ್ದು, ಅವರು ಶಿಶುವನ್ನು ಆಂಬುಲೆನ್ಸ್ ಮೂಲಕ ರಾಯಬಾಗ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ರಾಯಬಾಗ ಸಿಡಿಪಿಒ ಅವರು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಶಿಶುವಿನ ತಾಯಿಯ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಇಟ್ನಾಳ ಗ್ರಾಮದ ಹಾಲಹಳ್ಳಿ ತೋಟದ ದೇವಸ್ಥಾನದಲ್ಲಿ ದೊರಕಿರುವ ಮಗುವಿಗೆ ರಾಯಬಾಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಆರೋಗ್ಯವಾಗಿದ್ದು, ಬೆಳಗಾವಿ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಒಪ್ಪಿಸಲಾಗುವುದು. ಈ ಘಟನೆ ಬಗ್ಗೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
| ಸಂತೋಷಕುಮಾರ ಕಾಂಬಳೆ ಸಿಡಿಪಿಒ, ರಾಯಬಾಗ