ಕುಷ್ಟಗಿ: ಗ್ರಾಹಕರು ವಸ್ತುಗಳ ಖರೀದಿ, ವಿವಿಧ ಸೇವೆ ಪಡೆಯುವಾಗ ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿದೇವಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆಡಳಿತದ ಸಹಯೋಗದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ನಿಮಿತ್ತ ಶನಿವಾರ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಗ್ರಾಹಕರಾಗಿರುತ್ತೇವೆ. ವಸ್ತುಗಳ ಗುಣಮಟ್ಟ, ಬೆಲೆ ಪರಿಶೀಲಿಸುವ ಹಕ್ಕು ಗ್ರಾಹಕರಿಗೆ ಇರುತ್ತದೆ. ಬೆಲೆ ಕಡಿಮೆ ಎಂಬ ಕಾರಣಕ್ಕೆ ಕಳಪೆ ವಸ್ತು ಖರೀದಿಸಬಾರದು. ಯಾವುದೇ ವಸ್ತು ಖರೀದಿಗೆ ರಶೀದಿ ಪಡೆಯುವುದು ಮುಖ್ಯವಾಗಿರುತ್ತದೆ. ಗ್ರಾಹಕರ ರಕ್ಷಣಾ ಕಾಯಿದೆ ಅಡಿ ವಕೀಲರ ಸೇವೆ ಸೇರಿಸಲಾಗಿದೆ. ಬಿತ್ತನೆ ಬೀಜ ಖರೀದಿಸುವಾಗ ಮೋಸವಾದರೆ ರೈತರು ಗ್ರಾಹಕರ ವೇದಿಕೆ ಮೋರೆ ಹೋಗಬಹುದು ಎಂದರು.
ಬಿಆರ್ಸಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶರಣಪ್ಪ ತೆಮ್ಮಿನಾಳ ಉಪನ್ಯಾಸ ನೀಡಿದರು. ತಹಸೀಲ್ದಾರ್ ಶ್ರುತಿ ಮಳ್ಳಪ್ಪಗೌಡ್ರ, ವಕೀಲರ ಸಂಘದ ಅಧ್ಯಕ್ಷ ವಿಜಯಮಹಾಂತೇಶ ಕುಷ್ಟಗಿ ಇದ್ದರು.