ನವದೆಹಲಿ: ಭಾರತದ ವಿವಿಧ ರಾಜ್ಯಗಳಲ್ಲಿ ಐಸಿಸ್ ತನ್ನ ಜಾಲವನ್ನು ವಿಸ್ತರಿಸುತ್ತದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದ್ದು, ಅದರಲ್ಲೂ ದಕ್ಷಿಣ ರಾಜ್ಯಗಳಲ್ಲಿ ಐಸಿಸ್ ಇರುವಿಕೆ ಬಲಗೊಳ್ಳುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಮಹಾರಾಷ್ಟ್ರ, ಕೇರಳ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಉಗ್ರ ಸಂಘಟನೆಗೆ ಸಂಬಂಧಿಸಿದ ಸಭೆಗಳು ನಡೆದಿವೆ. ಉಗ್ರರೊಂದಿಗೆ ಸಂಪರ್ಕ ಹೊಂದಿರುವ 11 ಮಂದಿಯನ್ನು ಗುರುತಿಸಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ದೆಹಲಿ ಪೊಲೀಸ್ ತಿಳಿಸಿದೆ.
ಗುಜರಾತ್, ತಮಿಳುನಾಡು ಮತ್ತು ಕೇರಳದಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿದ್ದು, ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ. ಐಸಿಸ್ನೊಂದಿಗೆ ಸಂಪರ್ಕ ಹೊಂದಿರುವ ಶಂಕಿತನೊಬ್ಬನನ್ನು ಗುಜರಾತ್ನಲ್ಲಿ ಬಂಧಿಸಲಾಗಿದೆ. ಅವನನ್ನು ದೆಹಲಿಗೆ ವಿಚಾರಣೆಗೆಂದು ಕರೆತರಾಲಾಗುವುದೆಂದು ಮಾಹಿತಿ ನೀಡಿದರು. ಅಲ್ಲದೆ, ತಮಿಳುನಾಡು ಮತ್ತು ಕೇರಳ ಗಡಿ ಬಳಿಯಿರುವ ಕಲಿಯಕ್ಕವಿಲೈನಲ್ಲಿ ಪೊಲೀಸ್ ಸಿಬ್ಬಂದಿ ವಿಲ್ಸನ್ ಎಂಬವರನ್ನು ಹತ್ಯೆಗೈದ ಆರೋಪಿಗಳಾದ ಶಮೀಮ್ ಮತ್ತು ತೌಫೀಕ್ಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.
ಗುರುವಾರ ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಬಂಧಿಸಲಾಗಿದ್ದು, ಕರ್ನಾಟಕ ಸೇರಿದಂತೆ ಕೇರಳ, ಬಿಹಾರ್, ಮಧ್ಯ ಪ್ರದೇಶ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ ಮತ್ತು ತೆಲಂಗಾಣದ ವಿವಿಧ ಪೊಲೀಸ್ ತಂಡ ದೆಹಲಿ ವಿಶೇಷ ಘಟಕದಿಂದ ಬಂಧಿಸಲಾಗಿರುವ ಮೂವರು ಉಗ್ರರನ್ನು ವಿಚಾರಣೆ ನಡೆಸುತ್ತಿವೆ.
ರಿಸರ್ಚ್ ಅನಾಲಿಸಿಸ್ ಆಫ್ ವಿಂಗ್(RAW) ಮತ್ತು ಇಂಟೆಲಿಜೆನ್ಸ್ ಬ್ಯೂರೋ(IB) ಉಪಸ್ಥಿತಿಯಲ್ಲಿ ಉಗ್ರರ ವಿಚಾರಣೆ ನಡೆಸಲಾಗುತ್ತಿದೆ. ಬಂಧಿತ ಮೂವರು ಉಗ್ರರನ್ನು ಖಾಜ ಮೊಯಿದ್ದೀನ್(52), ಸೈದ್ ಅಲಿ ನವಾಸ್(32) ಮತ್ತು ಅಬ್ದುಲ್ ಸಮಾದ್(28) ಎಂದು ಗುರುತಿಸಲಾಗಿದ್ದು, ಹಿಂದು ನಾಯಕ ಕೆ.ಪಿ. ಸುರೇಶ್ ಕುಮಾರ್ ಹತ್ಯೆಯಲ್ಲಿ ಇವರ ಕೈವಾಡ ಇದೆ ಎಂಬ ಶಂಕೆ ವ್ಯಕ್ತವಾಗಿದೆ. (ಏಜೆನ್ಸೀಸ್)