ಸಿಂಧನೂರು: ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಶಿವಯೋಗಿಗಳ ಜಾತ್ರಾ ಮಹೋತ್ಸವ ಅಂಗವಾಗಿ ಜವಳಗೇರಾ ಗ್ರಾಮದಲ್ಲಿ ಇಷ್ಟಲಿಂಗ ಪೂಜೆ ಪ್ರಾತ್ಯಕ್ಷಿಕೆ ಹಾಗೂ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮ ಭಾನುವಾರ ನಡೆಯಿತು.
ಸಾನ್ನಿಧ್ಯ ವಹಿಸಿದ್ದ ಯದ್ದಲದೊಡ್ಡಿ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮೀಜಿ ಮಾತನಾಡಿ, ಮಾ.5, 6 ಮತ್ತು 7 ರಂದು ಯದ್ದಲದೊಡ್ಡಿಯ ಕತೃ ಸಿದ್ಧಲಿಂಗ ಶಿವಯೋಗಿಯ ಜಾತ್ರಾ ಮಹೋತ್ಸವ ಜರುಗಲಿದೆ. ಈ ಹಿನ್ನೆಲೆಯಲ್ಲಿ ಇಷ್ಟಲಿಂಗ ಪೂಜೆಯ ಮಹತ್ವ ತಿಳಿಸಲಾಗುತ್ತಿದೆ.
ಇಷ್ಟಲಿಂಗ ಪೂಜೆಗಾಗಿ ಎಲ್ಲೂ ಹೊಗಬೇಕಾಗಿಲ್ಲ. ಯಾರೊಬ್ಬರ ನೆರವು ಕೂಡ ಬೇಕಾಗಿಲ್ಲ. ಬಹು ಸಾಮಗ್ರಿಗಳ ಆಪೇಕ್ಷೆ ಇರುವುದಿಲ್ಲ. ಪರಿಶುದ್ಧ ಭಾವನೆ, ಶುದ್ಧ ಜಲ, ಭಸ್ಮ ಹಾಗೂ ಒಂದು ಬಿಲ್ವಪತ್ರಿ ಇದ್ದರೆ ಸಾಕು. ಶಿವನು ಪ್ರಸನ್ನನ್ನಾಗಿ ಸಕಲ ಇಷ್ಟಾರ್ಥಗಳನ್ನು ದಯಪಾಲಿಸುವನು ಎಂದು ಮಹಾಲಿಂಗ ಸ್ವಾಮೀಜಿ ತಿಳಿಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ, ವೀರಶೈವ ಲಿಂಗಾಯತ ಧರ್ಮವು ಎಲ್ಲ ಜಾತಿ, ಧರ್ಮದವರನ್ನು ಪ್ರೀತಿ ಮತ್ತು ಗೌರವದಿಂದ ಕಾಣುತ್ತದೆ. ಯಾವುದೇ ಭೇದ ಮಾಡದೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಪರಂಪರೆ ಹೊಂದಿದೆ. ಇಷ್ಟಲಿಂಗ ಪೂಜೆಯನ್ನು ಕ್ರಮಬದ್ಧ ಮತ್ತು ಶ್ರದ್ಧಾಭಕ್ತಿಯಿಂದ ಮಾಡಿದರೆ ಒಳಿತಾಗುತ್ತದೆ ಎಂದರು. ಪ್ರಮುಖರಾದ ಸಂಗಮೇಶ್ವರರಾವ ನಾಡಗೌಡ, ಚಂದ್ರಭೂಪಾಲ ನಾಡಗೌಡ ಇದ್ದರು.