ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ 17ನೇ ಆವೃತ್ತಿಯ 25ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಪಡೆ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ್ದು, ಹಾಲಿ ಟೂರ್ನಿಯಲ್ಲಿ ಆರ್ಸಿಬಿಗೆ ಇದು ಐದನೇ ಸೋಲಾಗಿದೆ. ಇತ್ತ ಬ್ಯಾಟ್ಸ್ಮನ್ಗಳು ಉತ್ತಮ ಮೊತ್ತ ಪೇರಿಸಿದರೂ ಬೌಲರ್ಗಳು ಅದನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಆರ್ಸಿಬಿ ಪರ ನಾಯಕ ಫಾಫ್ ಡು ಪ್ಲೆಸಿಸ್, ರಜತ್ ಪಾಟಿದಾರ್ ಹಾಗೂ ದಿನೇಶ್ ಕಾರ್ತಿಕ್ ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಮೊತ್ತ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ, ಪಂದ್ಯ ಮುಗಿದ ಬಳಿಕ ಅಂಪೈರಿಂಗ್ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಅಂಪೈರ್ಗಳು ತೆಗೆದುಕೊಂಡ ನಿರ್ಧಾರ ಮುಂಬೈ ಪರವಾಗಿತ್ತು ಎಂದು ಅನೇಕರು ದೂರಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಸೆಟ್ಟೇರಿತ್ತು ದುನಿಯಾ ವಿಜಯ್ ನಟನೆಯ 29ನೇ ಚಿತ್ರ; ಅಪ್ಪನ ಚಿತ್ರದ ಮೂಲಕವೇ ಸ್ಯಾಂಡಲ್ವುಡ್ಗೆ ಮಗಳ ಎಂಟ್ರಿ
ಪಂದ್ಯ ಶುರುವಾಗುವುದಕ್ಕೂ ಮುನ್ನ ನಡೆದ ಟಾಸ್ ವೇಳೆ ರೆಫ್ರಿ ಕಾಯಿನ್ ತಿರುಗಿಸುವ ಮೂಲಕ ಮುಂಬೈ ಇಂಡಿಯನ್ಸ್ಗೆ ಅನುಕೂಲವಾಗುವಂತೆ ಪರಿಸ್ಥಿತಿ ನಿರ್ಮಾಣ ಮಾಡಿದರು ಎಂಬ ಆರೋಪ ಕೇಳಿ ಬಂದಿದೆ. ಇದಾದ ಬಳಿಕ ಕೊನೆಯ ಓವರ್ನಲ್ಲಿ ಫೀಲ್ಡರ್ನ ದೇಹದ ಭಾಗ ಬೌಂಡರಿ ಗಡಿಗೆ ತಾಗಿತ್ತು. ಬೌಂಡರಿ ಹೋಗಿದ್ದನ್ನು ಕೊಡದೆ ಇರುವ ವಿಚಾರವೂ ಚರ್ಚೆ ಹುಟ್ಟುಹಾಕಿದೆ. ಇದೇ ಸಂದರ್ಭದಲ್ಲಿ ಫೀಲ್ಡರ್ ಸಂಪರ್ಕದಲ್ಲಿ ಬಾಲ್ ಇದ್ದರೂ ಆದಾಗ್ಯೂ ಇದನ್ನು ಬೌಂಡರಿ ನೀಡಲಿಲ್ಲ. ಈ ಬಗ್ಗೆ ವಿರಾಟ್ ಕೊಹ್ಲಿ ಅಸಮಾಧಾನ ಹೊರಹಾಕಿದ್ದು, ಅಂಪೈರ್ ಬಳಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರ್ಸಿಬಿ ಪರ ಸ್ಫೋಟಕ ಬ್ಯಾಟಿಂಗ್ ಆಡುತ್ತಿರುವ ಮಹಿಪಾಲ್ ಲೊಮ್ರೊರ್ ತಾವು ಎದುರಿಸಿದ ಮೊದಲ ಎಸೆತದಲ್ಲಿ ಎಲ್ಬಿಗೆ ಬಲಿಯಾದರು. ಈ ಬಾಲ್ ಕೂಡ ವಿಕೆಟ್ನಿಂದ ಹೊರಗೆ ಹೋಗುತ್ತಾ ಇತ್ತು. ಆದಾಗ್ಯೂ ಅಂಪೈರ್ ಔಟ್ ನೀಡಿದ್ದರು. ನಂತರ ರಿವ್ಯೂ ತೆಗೆದುಕೊಂಡಾಗ ಸ್ಟಂಪ್ಗೆ ಸ್ವಲ್ಪ ತಾಗುತ್ತಿದೆ ಎನ್ನುವ ಕಾರಣಕ್ಕೆ ಔಟ್ ನೀಡಲಾಯಿತು. ಇದಲ್ಲದೆ ದಿನೇಶ್ ಕಾರ್ತಿಕ ಬ್ಯಾಟಿಂಗ್ ಮಾಡುವ ವೇಳೆ ನೋಬಾಲ್ ಎಸೆಯಲಾಗಿತ್ತು. ಇದನ್ನು ಮೂರನೇ ಅಂಪೈರ್ ಬಳಿ ಪ್ರಶ್ನಿಸಿದಾಗ ಅವರು ನಾರ್ಮಲ್ ಬಾಲ್ ಎಂದು ಹೇಳಿದರು. ಈ ಎಲ್ಲಾ ಕಾರಣಗಳು ಆರ್ಸಿಬಿ ಸೋಲಿಗೆ ಪ್ರಮುಖ ಕಾರಣ ಎಂದು ಹೇಳಲಾಗಿದ್ದು, ಅಂಪೈರ್ಗಳ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಭಿಮಾನಿಗಳು ಇದರ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.