ಬೆಂಗಳೂರು: ಸಲಗ ಬಳಿಕ ಭೀಮಾ ಚಿತ್ರದಲ್ಲಿ ಬ್ಯುಸಿಯಾಗಿದ್ದ ದುನಿಯಾ ವಿಜಯ್ ನಟನೆಯ 29ನೇ ಚಿತ್ರ ಗುರುವಾರ (ಏಪ್ರಿಲ್ 11) ಸೆಟ್ಟೇರಿದೆ. ಈ ಚಿತ್ರದ ಮೂಲಕ ದುನಿಯಾ ವಿಜಯ್ ಅವರ ಪುತ್ರಿ ರಿತನ್ಯ (ಮೋನಿಕಾ) ಚಿತ್ರರಂಗ ಪ್ರವೇಶಿಸುತ್ತಿದ್ದಾರೆ.
ಜೆಂಟಲ್ಮ್ಯಾನ್, ಗುರುಶಿಷ್ಯರು ನಿರ್ದೇಶಿಸಿದ್ದ ಕಾಟೇರ ಚಿತ್ರದಲ್ಲಿ ಬರಹಗಾರರಾಗಿ ಕೆಲಸ ಮಾಡಿದ್ದ ಜಡೇಶ್ ಕುಮಾರ್ ಹಂಪಿ ನಿರ್ದೇಶಿಸುತ್ತಿದ್ದು, ಈ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟೆಯ ಸಾರಥಿ ಸಿನಿಮಾ ನಿರ್ಮಿಸಿದ್ದ ಕೆ.ವಿ. ಸತ್ಯಪ್ರಕಾಶ್ ಅವರು 12 ವರ್ಷಗಳ ಬಳಿಕ ಸಾರಥಿ ಫಿಲ್ಮ್ಸ್ ಮೂಲಕ ಹೊಸ ಸಿನಿಮಾ ನಿರ್ಮಿಸುತ್ತಿದ್ದಾರೆ.
ಈ ವೇಳೆ ಮಾತನಾಡಿರುವ ನಟ ದುನಿಯಾ ವಿಜಯ್, ಇಂದು ನಾನು ಚಿತ್ರರಂಗಕ್ಕೆ ಕಾಲಿಟ್ಟು 30 ವರ್ಷಗಳು ಕಳೆದವು. ಅದೇ ನಾನು ಮಗಳಿಗೆ ಹೇಳುತ್ತಿದ್ದೆ. ನಾನು ಸರ್ಕಸ್ ಮಾಡಿ ಇವತ್ತಿಗೆ 30 ವರ್ಷ ಆಯ್ತು. ಈ ಸ್ಥಾನಕ್ಕೆ ಬರುವುದಕ್ಕೆ 18 ವರ್ಷ ಬೇಕಾಯ್ತು. ಅದಕ್ಕೂ ಮುಂಚೆ ಹೀರೋ ಆಗುವುದಕ್ಕೆ ಸರ್ಕಸ್ ಹೊಡೆದಿದ್ದು, ಇಲ್ಲಿವರೆಗೂ ಬರೋಕೆ ನನಗಾದ ಆ ಅವಮಾನ ಹಾಗೂ ನೋವುಗಳು ನನ್ನ ಮೆಟ್ಟಿಲು ಅದನ್ನು ಸುಲಭವಾಗಿ ಹತ್ತಿಸಿಕೊಂಡು ಬಂದು ನಿನಗೆ ಕೊಡುತ್ತಿದ್ದೇನೆ. ಅದನ್ನು ಹುಷಾರಾಗಿ ಕಾಪಾಡಿಕೊಂಡು ಹೋಗು ಎಂದು ಮಗಳಿಗೆ ಹೇಳುತ್ತಿದ್ದೆ. ನನ್ನ ಮಗಳು ಮುಂಬೈನ ಅನುಪಮ್ ಖೇರ್ ಸಂಸ್ಥೆಯಲ್ಲಿ ಅಭಿನಯ ಕಲಿತು ಬಂದಿದ್ದಾಳೆ. ಈ ಸಿನಿಮಾದಲ್ಲೂ ನನ್ನ ಮಗಳ ಪಾತ್ರದಲ್ಲೇ ಅಭಿನಯಿಸುತ್ತಿದ್ದಾಳೆ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.
ಇದನ್ನೂ ಓದಿ: ಗೆಲ್ಲಲೇಬೇಕಾದ ಒತ್ತಡದಲ್ಲಿ ಆರ್ಸಿಬಿ; ಮಹತ್ವದ ಪಂದ್ಯದಲ್ಲಿ ಬದಲಾವಣೆ ಖಚಿತ!
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಜಡೇಶ್ ಕುಮಾರ್ ಹಂಪಿ, ಇದು ನಾನು ಕಂಡು, ಕೇಳಿದ ನೈಜ ಕಥೆ. ಇದು ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ. ಕೋಲಾರ ಭಾಗದ ಕಥೆಯಾದ್ದರಿಂದ ಸಂಭಾಷಣೆ ಆ ಶೈಲಿಯಲ್ಲೇ ಇರಲಿದೆ. ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. 90ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶಿವರಾಮ ಕಾರಂತರು ಬರೆದ ಚೋಮನ ದುಡಿ ಕಾದಂಬರಿಯ ಚೋಮನ ಪಾತ್ರವೇ ಈ ಸಿನಿಮಾಗೆ ಸ್ಫೂರ್ತಿ. ಆದರೆ ಆ ಪುಸ್ತಕಕ್ಕೂ ಈ ಸಿನಿಮಾಗೂ ಸಂಬಂಧ ಇಲ್ಲ ಎಂದು ನಿರ್ದೇಶಕ ಜಡೇಶ್ ಕುಮಾರ್ ಹೇಳಿದ್ದಾರೆ.
ಚಿತ್ರದಲ್ಲಿ ದುನಿಯಾ ವಿಜಯ್ಗೆ ನಾಯಕಿಯಾಗಿ ರಚಿತಾ ರಮ್ ನಟಿಸುತ್ತಿದ್ದು, ಬೆಂಗಳೂರಿನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗುತ್ತಿದೆ. ಕೋಲಾರ ಹಾಗೂ ಮೈಸೂರಿನಲ್ಲೂ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಸ್ವಾಮಿ ಗೌಡ ಛಾಯಾಗ್ರಹಣ ಮಾಡುತ್ತಿದ್ದು, ಚಿತ್ರದ ಶೀರ್ಷಿಕೆಯನ್ನು VK29 ಎಂದು ಇಡಲಾಗಿದೆ.