ನವದೆಹಲಿ: ಹಿಂದೂ ಧರ್ಮದ ಆರಾಧ್ಯ ದೈವ ಶ್ರೀ ರಾಮಚಂದ್ರ ಹಾಗೂ ರಾಮಾಯಣವನ್ನು ನೆನಪಿಸುವ ಶ್ರೀ ರಾಮಾಯಣ ದರ್ಶನಂ (ಭಾರತ್ ಗೌರವ್ ಟೂರಿಸ್ಟ್ ಟ್ರೈನ್) ರೈಲು ಸಂಚಾರ ಆರಂಭಿಸಿದೆ.
ಇದು ದೇಶಾದ್ಯಂತ 18 ದಿನಗಳ ಕಾಲ 8 ಸಾವಿರ ಕಿಮೀ ಸಂಚಾರ ನಡೆಸಲಿದೆ. ದಿಲ್ಲಿಯಿಂದ ಆರಂಭವಾಗಿ ಶ್ರೀ ರಾಮಜನ್ಮಭೂಮಿ ಅಯೋಧ್ಯ, ಜನಕಾಪುರ (ನೇಪಾಳ), ವಾರಾಣಸಿ, ನಾಸಿಕ್, ರಾಮೇಶ್ವರಂಗಳಲ್ಲಿ ಸಂಚರಿಸಲಿದೆ.
ಕೊನೆಯದಾಗಿ ರಾಮೇಶ್ವರಂಗೆ ತಲುಪಿ ಮತ್ತೆ ದೆಹಲಿಗೆ ಹಿಂತಿರುಗಲಿದೆ. ಈ ರೈಲು ದೆಹಲಿಯಿಂದ ಮೊದಲು ತಲುಪುವ ಸ್ಥಳವೇ ಅಯೋಧ್ಯೆ, ಅಲ್ಲಿಂದ ಹನುಮಾನ್ ಟೆಂಪಲ್, ಭಾರತ್ ಮಂದಿರ, ನಂದಿಗ್ರಾಮ, ಬಕ್ಸರ್ ಸೇರಿದಂತೆ ಗಂಗಾ ನದಿ ದಡದಲ್ಲಿರುವ ವಾರಾಣಸಿ ಸೇರಿದಂತೆ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳಿಗೂ ತಲುಪಲಿದೆ.
ಇನ್ನೂ ಸೀತಾಮಾತೆಯ ತವರೂರು ನೇಪಾಳಕ್ಕೂ ಈ ರೈಲು ಭೇಟಿ ನೀಡಲಿದೆ. ಜನಕಾಪುರಕ್ಕೆ ತಲುಪಿ ಅಲ್ಲಿಂದ ಮತ್ತೆ ಪ್ರಯಾಗ್, ಚಿತ್ರಕೂಟ್ಗೆ ತೆರಳಿ ಅಲ್ಲಿಂದ ದಕ್ಷಿಣ ಭಾರತದತ್ತ ಮುಖ ಮಾಡಲಿದೆ.
ಮೊದಲಿಗೆ ಮಹಾರಾಷ್ಟ್ರದ ನಾಸಿಕ್, ನಂತರ ತ್ರಯಂಬಕೇಶ್ವರ, ಪಂಚವಟಿ ಇದಾದ ಬಳಿಕ ಕರ್ನಾಟಕದ ಹಂಪಿಗೂ ಬರಲಿದೆ. ಇಲ್ಲಿ ಆಂಜನೇಯ ಜನ್ಮಭೂಮಿ ಕಿಷ್ಕಿಂದೆಗೆ ತಲುಪಿದ ಬಳಿಕ ಸೀದಾ ರಾಮೇಶ್ವರಂನ ದನುಷ್ಕೋಟಿಗೆ ತಲುಪಲಿದೆ. ಹೀಗೆ ರಾಮಾಯಣದಲ್ಲಿ ಉಲ್ಲೇಖವಾಗಿರುವ ಶ್ರೀರಾಮಚಂದ್ರ ನಡೆದಾಡಿದ ಪೌರಾಣಿಕ ಸ್ಥಳಗಳಿಗೆ ಈ ರೈಲು ಭೇಟಿ ನೀಡಲಿದೆ. (ಏಜೆನ್ಸೀಸ್)