ನವದೆಹಲಿ: ಅಮೆರಿಕ ಸೈನಿಕರು ಇರಾನ್ನ ಸೇನಾ ಮುಖ್ಯಸ್ಥ ಜನರಲ್ ಖಾಸಿಮ್ ಸೊಲೈಮಾನಿ ಅವರನ್ನು ಹತ್ಯೆ ಮಾಡಿದ ಬಳಿಕ ಎರಡೂ ರಾಷ್ಟ್ರಗಳ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಕಡಿಮೆ ಮಾಡಿ ಶಾಂತಿ ಸ್ಥಾಪನೆ ಮಾಡಲು ಭಾರತ ಯಾವುದೇ ಕ್ರಮ ತೆಗೆದುಕೊಂಡರೂ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಭಾರತದಲ್ಲಿರುವ ಇರಾನ್ ರಾಯಭಾರಿ ಅಲಿ ಚೆಗೆನಿ ತಿಳಿಸಿದ್ದಾರೆ.
ಇರಾಕ್ನಲ್ಲಿರುವ ಅಮೆರಿಕದ ಎರಡು ಸೇನಾ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಬಳಿಕ ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಲಿ ಚೆಗೆನಿ, ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುವಲ್ಲಿ ಭಾರತ ಸಕ್ರಿಯವಾಗಿದೆ. ಪ್ರಮುಖ ಪಾತ್ರ ವಹಿಸುತ್ತಿದೆ. ಅಲ್ಲದೆ ಇರಾನ್ಗೆ ಭಾರತ ಮಿತ್ರರಾಷ್ಟ್ರವೂ ಹೌದು. ಸದ್ಯ ಉಂಟಾಗಿರುವ ಬಿಕ್ಕಟ್ಟಿನ ಶಮನಕ್ಕೆ ಯಾವ ದೇಶ ಮುಂದಾದರೂ ನಮಗೆ ಅಭ್ಯಂತರ ಇಲ್ಲ. ಅದರಲ್ಲೂ ಭಾರತ ಆಸಕ್ತಿ ತೋರಿಸಿದರೆ ಖಂಡಿತ ಸ್ವಾಗತಿಸುತ್ತೇವೆ ಎಂದಿದ್ದಾರೆ.
ನಾವು ಯುದ್ಧದ ಪರವಾಗಿ ಇಲ್ಲ. ನಾವೂ ಶಾಂತಿಗಾಗಿ ಕಾಯುತ್ತಿದ್ದೇವೆ. ಎಲ್ಲರೂ ಚೆನ್ನಾಗಿರಬೇಕು ಎಂಬುದೇ ನಮ್ಮ ಆಶಯ ಎಂದಿದ್ದಾರೆ.
ನಾವು ಸುಮ್ಮನೆ ಅಮೆರಿಕ ಸೇನೆಗಳ ಮೇಲೆ ದಾಳಿ ಮಾಡಿಲ್ಲ. ಅವರ ದಾಳಿಗೆ ಪ್ರತಿದಾಳಿ ನಡೆಸಿದ್ದೇವೆ ಅಷ್ಟೇ. ಜನರಲ್ ಖಾಸಿಮ್ ಸೊಲೈಮಾನಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಮಂದಿಯ ಬೇಡಿಕೆಯೂ ಅದೇ ಆಗಿತ್ತು. ಹಾಗಂದ ಮಾತ್ರಕ್ಕೆ ಯುದ್ಧ ಮಾಡುತ್ತೇವೆ ಎಂದು ಅಲ್ಲ. ನಮಗೂ ಶಾಂತಿ, ಸೌಹಾರ್ದತೆಯೇ ಬೇಕು ಎಂದಿದ್ದಾರೆ. (ಏಜೆನ್ಸೀಸ್)