ಹೊಳೆಹೊನ್ನೂರು: ನಮ್ಮ ದೇಶದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವುದರಲ್ಲಿ ನಮ್ಮೆಲ್ಲರ ಪಾತ್ರ ಮಹತ್ವದಾಗಿದೆ ಎಂದು ಎಂಎಲ್ಸಿ ಡಿ.ಎಸ್.ಅರುಣ್ ಕುಮಾರ್ ಹೇಳಿದರು.
ಶಿವಮೊಗ್ಗ ಅಕ್ಷರ ಸಮೂಹ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಅಕ್ಷರ ನವರಾತ್ರಿ ಉತ್ಸವ ಉದ್ಘಾಟಿಸಿ ಮಾತನಾಡಿ, ನಮ್ಮ ಪರಂಪರೆಯಿಂದ ಬಂದ ಹಬ್ಬ-ಹರಿದಿನಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕು. ಇಂದಿನ ಆಧುನಿಕ ಜಗತ್ತಿನಲ್ಲಿ ದುಡ್ಡಿನ ಹಿಂದೆ ಓಡುತ್ತಿರುವುದರಿಂದ ನಾವು ನಮ್ಮ ಪರಂಪರೆ ಹಾಗೂ ಸಂಸ್ಕೃತಿಯನ್ನು ಮರೆಯುತ್ತಿರುವುದು ವಿಪರ್ಯಾಸ. ಇಂತಹ ಕಾರ್ಯಕ್ರಮಗಳಿಂದ ಯುವಜನತೆ ಹಾಗೂ ಮಕ್ಕಳನ್ನು ನಮ್ಮ ಸಂಸ್ಕೃತಿಯ ಕಡೆಗೆ ತರುವಂತ ಕೆಲಸವಾಗುತ್ತಿದೆ ಎಂದರು.
ಮಾಜಿ ಶಾಸಕ ಕೆ.ಬಿ.ಅಶೋಕ್ ನಾಯ್ಕ ಮಾತನಾಡಿ, ಅಕ್ಷರ ಸಂಸ್ಥೆಯು ದೇಶದ ಸಂಸ್ಕೃತಿಗೆ ಬಗ್ಗೆ ಹಿಂದಿನಿಂದಲೂ ತನ್ನದೇ ಆದ ಛಾಪು ಮೂಡಿಸುತ್ತಿದೆ. ಇಂದು ನವರಾತ್ರಿ ಉತ್ಸವದ ಮೂಲಕ ಪಾಲಕರ ಹಾಗೂ ವಿದ್ಯಾರ್ಥಿಗಳನ್ನು ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದೆ. ಹಬ್ಬಗಳನ್ನು ಶಾಲೆಗಳಲ್ಲಿ ಆಚರಿಸುವುದರಿಂದ ಹಬ್ಬದ ಮೌಲ್ಯ ಹಾಗೂ ಉದ್ದೇಶವನ್ನು ಮಕ್ಕಳಿಗೆ ತಿಳಿಸಿಕೊಡಬಹುದಾಗಿದೆ. ಇಂತಹ ಆಚರಣೆಗಳಿಂದಾಗಿ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯಬಹುದಾಗಿದೆ. ಹಿಂದಿನಿಂದಲೂ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ಅಪಾರವಾದ ಗೌರವವಿದೆ ಎಂದು ಹೇಳಿದರು.
ಅಕ್ಷರ ಸಂಸ್ಥೆಯ ಶಿಕ್ಷಕಿಯರ ನವದುರ್ಗೆಯರ ನೃತ್ಯ ಮತ್ತು ಪಾಲಕರ ನೃತ್ಯವು ನೋಡುಗರ ಗಮನ ಸೆಳೆಯಿತು. ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ರತ್ನಾ ಕುಮಾರಿ, ಪ್ರಾಚಾರ್ಯ ಗಿರೀಶ್, ಮೋಹನ್, ಡಾ. ಸಂದೀಪ್, ಶ್ರೇಯಾ, ಕಾರ್ತಿಕ್ ಇತರರಿದ್ದರು.