ಹರಿಹರ: ಪಾಲಕರು ಮಕ್ಕಳು ಹೆಣ್ಣಾಗಲಿ, ಗಂಡಾಗಲಿ ಸಮಾನ ಆದ್ಯತೆ ನೀಡಿ ಬೆಳೆಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಚಂದ್ರಮೋಹನ್ ಸಲಹೆ ನೀಡಿದರು.
ತಾಲೂಕಿನ ಕೊಂಡಜ್ಜಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಹಿಳೆ, ಪುರುಷರು ದೇಶದ ಎರಡು ಕಣ್ಣಿದ್ದಂತೆ. ಇಬ್ಬರನ್ನೂ ಸಮಾನವಾಗಿ ಬೆಳೆಸಿದರೆ ದೇಶವು ಬಲಿಷ್ಠವಾಗಿ ಬೆಳೆಯುತ್ತದೆ ಎಂದರು.
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಸುಧಾ ಪಿ. ಸುಲಾಕೆ ಮಾತನಾಡಿ, ಮಹಿಳೆಯರು ಎಲ್ಲ ಕೆಲಸ ಕಾರ್ಯಗಳನ್ನು ಸಕ್ಷಮವಾಗಿ ನಿರ್ವಹಣೆ ಮಾಡುತ್ತಾರೆಂಬುದು ಸಾಬೀತಾಗಿದೆ. ದುಡಿಯುವ ಮಹಿಳೆ ಮನೆ ಒಳಗಿನ ಹಾಗೂ ಹೊರಗಿನ ವ್ಯವಹಾರ ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ. ಉಮ್ಮಣ್ಣ ಮಾತನಾಡಿ, ಮಹಿಳೆಯರಿಗೆ ಸರ್ಕಾರದಿಂದ ವಿವಿಧ ಕ್ಷೇತ್ರಗಳಲ್ಲಿ ಮೀಸಲು ಒದಗಿಸಲಾಗಿದೆ. ನಾವು ಹೆಣ್ಣು ಮಕ್ಕಳು ಎಂಬ ಕೀಳರಿಮೆ ಬಿಟ್ಟು ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ, ಬಲತ್ಕಾರದಂತಹ ಕೃತ್ಯ ಎಸಗುವವರ ಮೇಲೆ ಕಾನೂನಾತ್ಮಕವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರೀತಿ, ಪ್ರೇಮದ ಸುಳಿಗೆ ಸಿಲುಕಿ ಭವಿಷ್ಯ ಹಾಳು ಮಾಡಿಕೊಳ್ಳದಂತೆ ವಿದ್ಯಾರ್ಥಿನಿಯರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಡಾ.ಶಶಿಕಲಾ ಮಾತನಾಡಿ, ಪುರುಷರಂತೆ ಮಹಿಳೆಯರಿಗೂ ಮತದಾನದ ಹಕ್ಕು ನೀಡಲಾಗಿದೆ. ಸೇನೆಯಲ್ಲೂ ಮಹಿಳೆಯರು ಸೇವೆ ಸಲ್ಲಿಸುತ್ತಿರುವುದು ಸಂತಸದ ವಿಷಯ. ಗ್ರಾಮೀಣ ಹಾಗೂ ಅನಕ್ಷರಸ್ಥ ಮಹಿಳೆಯರು ಧರ್ಮದ ಹೆಸರಲ್ಲಿ ಮೌಢ್ಯಾಚರಣೆ ಮಾಡದಂತೆ ಜಾಗೃತಿ ಮೂಡಿಸಬೇಕಿದೆ ಎಂದರು.
ಗ್ರಾಪಂ ಸದಸ್ಯರಾದ ಕರಿಯಮ್ಮ, ಆಶಾ ಕಾರ್ಯಕರ್ತೆಯರು, ಗ್ರಾಮದ ಮಹಿಳೆಯರಿದ್ದರು.