ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ, ರಾಷ್ಟ್ರೀಯ ಶಿಕ್ಷಣ ಸಮಿತಿ, ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿ(ಎಟಿಎನ್ಸಿಸಿ)ನ ಆಶ್ರಯದಲ್ಲಿ ಡಿ.10ರಿಂದ 12ರವರೆಗೆ ಕುವೆಂಪು ವಿವಿಯ 2023-24ನೇ ಸಾಲಿನ 36ನೇ ವಾರ್ಷಿಕ ಅಂತರ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟ ನಗರದ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎಟಿಎನ್ಸಿ ಕಾಲೇಜಿನ ಪ್ರಾಚಾರ್ಯೆ ಪ್ರೊ. ಪಿ.ಆರ್.ಮಮತಾ ತಿಳಿಸಿದರು.
ಕುವೆಂಪು ವಿವಿ ವ್ಯಾಪ್ತಿಯ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ 86 ಕಾಲೇಜುಗಳ ಪದವಿ, ಡಿಪ್ಲೋಮಾ ಮೇಲ್ಪಟ್ಟ 800ರಿಂದ 1000 ಕ್ರೀಡಾಪಟುಗಳು ಭಾಗವಹಿಸುವರು. ವಿದ್ಯಾರ್ಥಿಗಳಿಗೆ 22 ಮತ್ತು ವಿದ್ಯಾರ್ಥಿನಿಯರಿಗೆ 21 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕ್ರೀಡಾಕೂಟದ ಮೂರನೇ ದಿನ ಬೆಳಗ್ಗೆ ಪುರುಷ ಮತ್ತು ಮಹಿಳೆಯರ ಮ್ಯಾರಥಾನ್ ಓಟವು ಎಂಆರ್ಎಸ್ ವೃತ್ತದಿಂದ ಆರಂಭಗೊಂಡು ವಡ್ಡಿನಕೊಪ್ಪ, ವಿಮಾನ ನಿಲ್ದಾಣ, ಕಾಚಿನಕಟ್ಟೆ, ದೊಡ್ಡೀಬೀಳು, ಲಕ್ಕಿನಕೊಪ್ಪವೃತ್ತ, ಮಾರುತಿ ಫಾರ್ಮ್ನಿಂದ ವಾಪಸ್ ಆಗಿ ಎಂಆರ್ಎಸ್ ವೃತ್ತಕ್ಕೆ ಮುಕ್ತಾಯಗೊಳ್ಳಲಿದೆ ಎಂದರು.
ಡಿ.10ರಂದು ಬೆಳಗ್ಗೆ 9ಕ್ಕೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕ್ರೀಡಾಕೂಟ ಉದ್ಘಾಟಿಸುವರು. ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್ಸಿಗಳಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ಕುವೆಂಪು ವಿವಿ ಪ್ರಭಾರ ಕುಲಪತಿ ಪ್ರೊ. ಎಸ್.ವೆಂಕಟೇಶ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಡಿ.ವಿರೂಪಾಕ್ಷ, ಎನ್ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್, ಕಾರ್ಯದರ್ಶಿ ಎಸ್.ಎನ್.ನಾಗರಾಜ್ ಮುಖ್ಯ ಅತಿಥಿಯಾಗಿದ್ದು ಎಟಿಎನ್ಸಿ ಕಾಲೇಜಿನ ಸಂಚಾಲಕ ಪ್ರೊ. ಕೆ.ಎಂ.ನಾಗರಾಜ ಉಪಸ್ಥಿತರಿರುವರು ಎಂದರು.
12ರಂದು ಮಧ್ಯಾಹ್ನ 3.30ಕ್ಕೆ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಕುವೆಂಪು ವಿವಿಯ ಕುಲಸಚಿವ ಸ್ನೇಹಲ್ ಲೋಖಂಡೆ, ಶಿವಮೊಗ್ಗ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ವಿಷ್ಣುಮೂರ್ತಿ, ಎನ್ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ನಿರ್ದೇಶಕ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಂ.ಟಿ.ಮಂಜುನಾಥ್, ಸರ್ಜಿ ಆಸ್ಪತ್ರೆಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಧನಂಜಯ ಸರ್ಜಿ ಮುಖ್ಯ ಅತಿಥಿಯಾಗಿರುವರು ಎಂದು ಹೇಳಿದರು.
ಕುವೆಂಪು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಡಿ.ವಿರೂಪಾಕ್ಷ, ಸಹಾಯಕ ನಿರ್ದೇಶಕ ಡಾ. ಎಸ್.ಎನ್.ರವೀಂದ್ರ ಗೌಡ, ಎಟಿಎನ್ಸಿ ಕಾಲೇಜಿನ ಸಂಚಾಲಕ ಪ್ರೊ. ಕೆ.ಎಂ.ನಾಗರಾಜು ಇದ್ದರು.