ಶಿವಮೊಗ್ಗ: ಕಳೆದ ವರ್ಷ ಕೆಎಫ್ಡಿ(ಮಂಗನ ಕಾಯಿಲೆ) ಭೀತಿ ಇರಲಿಲ್ಲ. ಆದರೂ ಮುನ್ನಚ್ಚರಿಕೆ ಕ್ರಮವಾಗಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಆರ್ಸಿಎಚ್ಒ ಡಾ. ನಾಗರಾಜ್ ನಾಯ್ಕ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಸಾಗರ, ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನಲ್ಲಿ ಕೆಎಫ್ಡಿ ಕಂಡುಬರುತ್ತಿದೆ. ಹಾಗಾಗಿ ಸೋಂಕು ತಡೆಗೆ ಬೇಕಿರುವ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ 266 ಡೆಂಘಿ, 55 ಕುಷ್ಟರೋಗ ಕೇಸ್ಗಳು ದಾಖಲಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹೇಳಿದರು.
ಅಕ್ಷರ ದಾಸೋಹ ಅಧಿಕಾರಿ ಮಾಹಿತಿ ನೀಡಿ, ವಾರಕ್ಕೆ ಮೂರು ದಿನ 1.5 ಲಕ್ಷ ಮಕ್ಕಳಿಗೆ ಮೊಟ್ಟೆ ನೀಡಲಾಗುತ್ತಿದ್ದು 4.5 ಲಕ್ಷ ಮೊಟ್ಟೆಗಳು ಬೇಕಾಗುತ್ತದೆ. ಸರ್ಕಾರ ವಾರಕ್ಕೆರಡು ಮೊಟ್ಟೆ ಕೊಡುವುದಾಗಿ ಹೇಳಿದೆ. ವರ್ಷಕ್ಕೆ 80 ದಿನ ಮೊಟ್ಟೆ ಕೊಡಬೇಕಿದೆ. ಹಾಗಾಗಿ ಏಪ್ರಿಲ್ನಿಂದ ಹೊಂದಾಣಿಕೆ ಆಗುವಂತೆ ಮೂರು ದಿನ ವಿತರಿಸಲಾಗುತ್ತಿದೆ. ಶೇ.92 ಮಕ್ಕಳು ಮೊಟ್ಟೆ ಇಷ್ಟಪಡುತ್ತಾರೆ. ಉಳಿದ ಶೇ.8 ಮಕ್ಕಳಿಗೆ ಚಿಕ್ಕಿ ಅಥವಾ ಬಾಳೆಹಣ್ಣು ನೀಡಲಾಗುತ್ತಿದೆ ಎಂದರು.