ಚಿಕ್ಕಬಳ್ಳಾಪುರ: ಆದಿ ಕರ್ನಾಟಕ ಸಮುದಾಯದವರ ಮನೆಯಲ್ಲಿ ಯಾರಾದರೂ ಮೃತಪಟ್ಟರೆ, ಶವ ಸಂಸ್ಕಾರ ಮಾಡಲು ಗ್ರಾಮ ದೇವತೆಗೆ 25 ಸಾವಿರ ರೂ. ದೇಣಿಗೆ ನೀಡಬೇಕು. ಇಲ್ಲವಾದಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡದ ಅನಿಷ್ಟ ಪದ್ಧತಿಯು ಗೌರಿಬಿದನೂರಿನಲ್ಲಿ ಜೀವಂತವಾಗಿದೆ.
ಹೌದು! ಸಾವಿನ ಮನೆಯಲ್ಲಿ ಮೊದಲೇ ದುಃಖದಲ್ಲಿರುವ ಶೋಷಿತ ಕುಟುಂಬವನ್ನು ಹಣಕ್ಕೆ ಪೀಡಿಸುವ ಪದ್ದತಿಯು ಈಗಲೂ ಜೀವಂತವಾಗಿದ್ದು ಪ್ರಕರಣ ವರದಿಯಾಗುತ್ತಿದ್ದಂತೆ ಸಂಬಂಧಪಟ್ಟ ಅಧಿಕಾರಿಗಳು ಊರಿಗೆ ಭೇಟಿ ನೀಡಿ, ನಿಲುವುಗಳನ್ನು ಬದಲಾಯಿಸಿದ್ದಾರೆ. ಮತ್ತೊಮ್ಮೆ ಪುನರಾವರ್ತನೆಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
*ಬೆಳಕಿಗೆ ಬಂದ ಪ್ರಕರಣ
ಗೌರಿಬಿದನೂರು ನಗರದ ಗೊಟಕನಾಪುರದಲ್ಲಿ ಆದಿಕರ್ನಾಟಕ ಸಮುದಾಯಕ್ಕೆ ಸೇರಿದ ಹನುಮಕ್ಕ ಎಂಬ ಮಹಿಳೆ ಕಳೆದ ಭಾನುವಾರ ಮೃತಪಟ್ಟಿದ್ದು ಗ್ರಾಮದಲ್ಲಿ ಪಾಲಿಸಿಕೊಂಡು ಬರುತ್ತಿರುವ ಪದ್ಧತಿಯಂತೆ ಆಕೆಯ ಶವ ಸಂಸ್ಕಾರಕ್ಕೆ ಗ್ರಾಮ ದೇವತೆ ಸತ್ಯಮ್ಮ ದೇವತೆಗೆ 25 ಸಾವಿರ ರೂ. ಪಾವತಿಸುವಂತೆ ಸಮುದಾಯದ ಹಿರಿಯ ಮುಖಂಡರು ಮೃತರ ಕುಟುಂಬದವರಿಗೆ ಸೂಚಿಸಿದ್ದಾರೆ. ಮಧ್ಯಾಹ್ನ ೧೨ರವರೆಗೆ ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿಲ್ಲ. ಇದಕ್ಕೆ ಕುಟುಂಬಸ್ಥರು ಸಾಲ ಸೋಲ ಮಾಡಿ 6 ಸಾವಿರ ರೂ. ಹಣವನ್ನು ನೀಡಿ, ವಿಧಿ ವಿಧಾನಗಳನ್ನು ಮುಗಿಸಿದ್ದಾರೆ.
* ಊರಿಗೆ ಅಧಿಕಾರಿಗಳ ದೌಡು*
ಗ್ರಾಮದಲ್ಲಿ ಈ ರೀತಿ ಅನಿಷ್ಟ ಪದ್ಧತಿ ಅನುಸರಿಸುತ್ತಿರುವ ಬಗ್ಗೆ ತಿಳಿಯುತ್ತಿದ್ದಂತೆ ತಹಸೀಲ್ದಾರ್ ಮಹೇಶ್ ಎಸ್.ಪತ್ರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ,, ನಗರ ಸಭೆ ಆಯುಕ್ತೆ ಗೀತಾ ಊರಿಗೆ ಭೇಟಿ ನೀಡಿ, ಮಾಹಿತಿ ಪಡೆದಿದ್ದಾರೆ. ದೇವರ ಹೆಸರಿನಲ್ಲಿ ಅನೌಪಚಾರಿಕವಾಗಿ ದೇಣಿಗೆ ಸಂಗ್ರಹಿಸುವುದು ಸರಿಯಲ್ಲ. ಈ ಅನಿಷ್ಠ ಪದ್ಧತಿಯನ್ನು ಮುಂದುವರಿಸಬಾರದು ಎಂದು ಗ್ರಾಮಸ್ಥರಿಗೆ ಸೂಚಿಸಿದ್ದಾರೆ.