ಸಿಡ್ನಿ: ಆಸೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಈಗಾಗಲೆ ‘ಮಿನಿ ಆಸ್ಪತ್ರೆ’ಯಾಗಿದೆ. ಸಿಡ್ನಿಯಲ್ಲೂ ಗಾಯಾಳುಗಳ ಪಟ್ಟಿ ಏರಿಕೆ ಕಂಡಿದೆ. ಎಡಗೈ ಹೆಬ್ಬೆರಳು ಮುರಿತಕ್ಕೊಳಗಾದ ರವೀಂದ್ರ ಜಡೇಜಾ ಮತ್ತು ಸ್ನಾಯು ಸೆಳೆತದ ನಡುವೆ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ದಿಟ್ಟ ಆಟವಾಡಿದ ಹನುಮ ವಿಹಾರಿ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಜಡೇಜಾ ಮತ್ತು ವಿಹಾರಿ ಮುಂದಿನ ತಿಂಗಳು ತವರಿನಲ್ಲಿ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಲಭ್ಯರಾಗುವುದು ಅನುಮಾನವೆನಿಸಿದೆ.
ಸಿಡ್ನಿ ಟೆಸ್ಟ್ನಲ್ಲಿ ರಿಷಭ್ ಪಂತ್ ಮೊಣಕೈ ಗಾಯದ ನಡುವೆ ಆಡಿದ್ದು, ಅವರ ಫಿಟ್ನೆಸ್ ಬಗ್ಗೆಯೂ ಕಳವಳವಿದೆ. ಅಶ್ವಿನ್ ಕೂಡ ಬೆನ್ನುನೋವಿನ ಸಮಸ್ಯೆ ನಡುವೆ ದಿಟ್ಟ ಬ್ಯಾಟಿಂಗ್ ಮಾಡಿದರು ಎಂದು ಅವರ ಪತ್ನಿ ಪ್ರೀತಿ ಬಹಿರಂಗಪಡಿಸಿದ್ದಾರೆ. ಇವರಿಬ್ಬರೂ ಅಂತಿಮ ಟೆಸ್ಟ್ ಆಡಲು ಫಿಟ್ ಆಗದಿದ್ದರೆ ಭಾರತಕ್ಕೆ ಮತ್ತಷ್ಟು ಸಮಸ್ಯೆ ಎದುರಾಗಲಿದೆ.
ಇದನ್ನೂ ಓದಿ: VIDEO | ಸಿಡ್ನಿ ಟೆಸ್ಟ್ ಪಂದ್ಯದ ಡ್ರಿಂಕ್ಸ್ ಬ್ರೇಕ್ನಲ್ಲಿ ದುರ್ಬುದ್ಧಿ ತೋರಿ ಸಿಕ್ಕಿಬಿದ್ದ ಸ್ಟೀವನ್ ಸ್ಮಿತ್
ಅಂತಿಮ ಟೆಸ್ಟ್ಗೆ ಕೇವಲ 3 ದಿನಗಳ ಅಂತರವಷ್ಟೇ ಇದೆ. ಅಲ್ಲದೆ ಕ್ವಾರಂಟೈನ್ನಿಂದಾಗಿ ಭಾರತದಿಂದಲೂ ಬದಲಿ ಆಟಗಾರರನ್ನು ಕಳುಹಿಸಲಾಗದು. ಟೆಸ್ಟ್ ತಂಡದಲ್ಲಿದ್ದ ಮೊಹಮದ್ ಶಮಿ, ಉಮೇಶ್ ಯಾದವ್ ಮತ್ತು ಕೆಎಲ್ ರಾಹುಲ್ ಈಗಾಗಲೆ ಗಾಯದಿಂದಾಗಿ ಹೊರಬಿದ್ದಿದ್ದರು.
ಬ್ರಿಸ್ಬೇನ್ನಲ್ಲೇ ಅಂತಿಮ ಟೆಸ್ಟ್
ಬಹುದಿನಗಳ ಗೊಂದಲಗಳಿಗೆ ಕೊನೆಗೂ ತೆರೆಬಿದ್ದಿದ್ದು, 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಜನವರಿ 15ರಿಂದ ಬ್ರಿಸ್ಬೇನ್ನಲ್ಲಿ ನಡೆಯುವುದು ಖಚಿತಗೊಂಡಿದೆ. ಭಾರತ ತಂಡ ಮಂಗಳವಾರ ಬ್ರಿಸ್ಬೇನ್ಗೆ ಪ್ರಯಾಣಿಸುವ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ (ಸಿಎ) ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಸೋಮವಾರ ಭರವಸೆ ನೀಡಿದ್ದಾರೆ. ಆದರೆ ಪಂದ್ಯಕ್ಕೆ ಪ್ರೇಕ್ಷಕರ ಸಂಖ್ಯೆಯನ್ನು ಶೇ. 50ಕ್ಕೆ ಇಳಿಸಲಾಗಿದೆ. ಬ್ರಿಸ್ಬೇನ್ನಲ್ಲಿ ಹಾರ್ಡ್ ಕ್ವಾರಂಟೈನ್ನಿಂದ ಭಾರತ ತಂಡದ ಆಟಗಾರರಿಗೆ ವಿನಾಯಿತಿ ನೀಡಬೇಕೆಂಬ ಬೇಡಿಕೆಯನ್ನು ಬಿಸಿಸಿಐ ಮುಂದುವರಿಸಿದೆ.
7 ವರ್ಷಗಳ ಬಳಿಕ ಕ್ರಿಕೆಟ್ಗೆ ಮರಳಿದ ಶ್ರೀಶಾಂತ್ಗೆ ಗೆಲುವಿನ ಸ್ವಾಗತ ನೀಡಿದ ಕೇರಳ