ನವದೆಹಲಿ : ಕರೊನಾ ರೋಗಿಗಳಿಗೆ ಅಗತ್ಯವಾಗಿರುವ ಆಕ್ಸಿಜನ್ಅನ್ನು ಒದಗಿಸಲು ತಕ್ಷಣವೇ ಸ್ಟೀಲ್ ಮತ್ತು ಪೆಟ್ರೋಲಿಯಮ್ ಕೈಗಾರಿಕೆಗಳ ಉತ್ಪಾದನೆಯನ್ನು ಕಡಿಮೆ ಮಾಡಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. “ಆರ್ಥಿಕ ಹಿತಾಸಕ್ತಿಗಳು ಮನುಷ್ಯರ ಪ್ರಾಣಕ್ಕಿಂತ ಹೆಚ್ಚು ಮಹತ್ವ ಹೊಂದಲು ಸಾಧ್ಯವಿಲ್ಲ” ಎಂದ ನ್ಯಾಯಾಲಯ ಕೂಡಲೇ ಆಕ್ಸಿಜನ್ನ ಕೈಗಾರಿಕಾ ಬಳಕೆಯನ್ನು ನಿಷೇಧಿಸಬೇಕೆಂದು ಸಲಹೆ ನೀಡಿತು.
ಕರೊನಾ ನಿರ್ವಹಣೆ ಬಗ್ಗೆ ಸಲ್ಲಿಸಲಾಗಿರುವ ರಿಟ್ ಅರ್ಜಿಯೊಂದರ ವಿಚಾರಣೆ ವೇಳೆ, ಇಂದು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವರ ನ್ಯಾಯಪೀಠ ಈ ಮಾತು ಹೇಳಿತು. ಕೇಂದ್ರ ಸರ್ಕಾರ ಕರೊನಾ ಚಿಕಿತ್ಸೆ ಮಾಡುತ್ತಿರುವ ಆಸ್ಪತ್ರೆಗಳಿಗೆ ಮೆಡಿಕಲ್ ಆಕ್ಸಿಜನ್ ಪೂರೈಕೆ ಕುರಿತಾಗಿ ಕೇಂದ್ರ ಸರ್ಕಾರ ಸಲ್ಲಿಸಿದ ಅಫಿಡೆವಿಟ್ಅನ್ನು ಪರಿಶೀಲಿಸಿ ನ್ಯಾಯಾಲಯ ಈ ನಿರ್ದೇಶನ ನೀಡಿತು.
ಇದನ್ನೂ ಓದಿ: ದೇಶದಲ್ಲಿ 44 ಲಕ್ಷ ಡೋಸೇಜ್ ಕರೊನಾ ಲಸಿಕೆ ವ್ಯರ್ಥ! ಆರ್ಟಿಐನಲ್ಲಿ ಬಯಲಾಯ್ತು ವರದಿ
“ದೆಹಲಿಗೆ ಆಕ್ಸಿಜನ್ ಪೂರೈಕೆ ಮಾಡುವುದರಲ್ಲಿ ಯಾವುದೇ ವಿಳಂಬ ಮಾಡುತ್ತಿಲ್ಲ. ಈ ಮುನ್ನ ಕೇಳಿದ್ದ ಪ್ರಮಾಣಕ್ಕಿಂತ ಈಗ ಹೆಚ್ಚಿನ ಬೇಡಿಕೆ ಬಂದಿರುವುದರಿಂದ ಉತ್ಪಾದನೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಆಮ್ಲಜನಕದ ಕೈಗಾರಿಕಾ ಬಳಕೆಯನ್ನು ಏಪ್ರಿಲ್ 22 ರಿಂದ ನಿಷೇಧಿಸಲಾಗಿದೆ ಎಂದು ಅಫಿಡೆವಿಟ್ನಲ್ಲಿ ಸರ್ಕಾರ ಹೇಳಿಕೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ಲಾಕ್ಡೌನ್ ಮುಂದುವರಿದರೆ ಎಲ್ಲವೂ ನಿಂತುಹೋಗುತ್ತದೆ. ಆ ಸನ್ನಿವೇಶದಲ್ಲಿ ಸ್ಟೀಲ್, ಪೆಟ್ರೋಲ್ ಮತ್ತು ಡೀಸೆಲ್ನ ಅಗತ್ಯ ಏನಿರುತ್ತದೆ ಎಂದು ಪ್ರಶ್ನಿಸಿದರು. “ಲಾಕ್ಡೌನ್ನಲ್ಲಿ ಏನು ಅಭಿವೃದ್ಧಿ ಆಗಲಿದೆ ?” ಎಂದ ನ್ಯಾಯಪೀಠ, ಸರ್ಕಾರವು ಆಮ್ಲಜನಕದ ಕೈಗಾರಿಕಾ ಬಳಕೆಯನ್ನು ನಿಷೇಧಿಸಲು ಏಪ್ರಿಲ್ 22 ರವರೆಗೆ ಏಕೆ ಕಾಯುತ್ತಿದೆ ಎಂದು ಪ್ರಶ್ನೆ ಹಾಕಿತು.
“ಕೈಗಾರಿಕೆಗಳು ಕಾಯಬಹುದು. ರೋಗಿಗಳು ಕಾಯಲು ಸಾಧ್ಯವಿಲ್ಲ. ಮನುಷ್ಯರ ಜೀವಗಳು ಅಪಾಯದಲ್ಲಿವೆ” ಎಂದ ನ್ಯಾಯಪೀಠ, “ಕೊರತೆ ಇರುವುದು ಈಗ. ನಿಷೇಧವನ್ನೂ ಈಗಲೇ ಮಾಡಬೇಕು. ಕೆಲವು ಸ್ಟೀಲ್ ಮತ್ತು ಪೆಟ್ರೋಲಿಯಂ ಕೈಗಾರಿಕೆಗಳಿಂದ ಆಕ್ಸಿಜನ್ ಪಡೆಯಲು ಪ್ರಯತ್ನಿಸಿ” ಎಂದಿತು. ಜೊತೆಗೆ ಏನೂ ಮಾಡದಿದ್ದರೆ ದೊಡ್ಡ ದುರಂತದೆಡೆಗೆ ನಾವು ಸಾಗಲಿದ್ದೇವೆ ಎಂದು ಎಚ್ಚರಿಸಿತು. (ಏಜೆನ್ಸೀಸ್)
ಆಂಬ್ಯುಲೆನ್ಸ್ ಮಾದರಿಯಲ್ಲಿ ಆಕ್ಸಿಜನ್ ಟ್ಯಾಂಕರ್ಗಳ ಸುಗಮ ಸಂಚಾರ; ಆಮ್ಲಜನಕ ಸ್ಥಾವರ ಸ್ಥಾಪನೆ