ಜಕಾರ್ತ: ಮೋಟರ್ ಬೈಕ್ ಟೈರ್ ಕೊರಳಿಗೆ ಸಿಲುಕಿಕೊಂಡು ಬಿಡಿಸಿಕೊಳ್ಳಲು ಒದ್ದಾಡುತ್ತಿರುವ ಉಪ್ಪು ನೀರಿನ ಮೊಸಳೆಯನ್ನು ರಕ್ಷಿಸಿದವರಿಗೆ ಒಳ್ಳೆಯ ಬಹುಮಾನ ನೀಡುವುದಾಗಿ ಇಂಡೋನೇಷ್ಯಾ ಸರ್ಕಾರ ಘೋಷಿಸಿದೆ.
ಈ ಒಂದು ಟಾಸ್ಕ್ನಲ್ಲಿ ಜಯಿಸಿದವರಿಗೆ ಸಾಕಷ್ಟು ನಗದು ಬಹುಮಾನ ಸಿಗಲಿದೆ. ಆದರೆ, ಅದಕ್ಕೆ ಮಾಡಬೇಕಾಗಿರುವುದು ಇಂಡೋನೇಷ್ಯಾದ ಸುಲಾವೆಸಿಯಲ್ಲಿರುವ ಪಲು ಹೆಸರಿನ 13 ಅಡಿ ಉದ್ದದ ಮೊಸಳೆ ಎದುರು ನಿಂತು ಅದರ ಕತ್ತಿಗೆ ಸಿಲುಕಿರುವ ಟೈರ್ ಅನ್ನು ತೆಗೆಯಬೇಕಾಗಿದೆ. ಆದರೆ, ಇದಕ್ಕೆ ಸಾಕಷ್ಟು ಗುಂಡಿಗೆ ಬೇಕು ಎಂಬುದು ಅನೇಕರ ಮಾತಾಗಿದೆ.
ಸ್ಥಳೀಯ ಅಧಿಕಾರಿಗಳು ಟೈರ್ ತೆಗೆಯುವ ಸಾಕಷ್ಟು ಪ್ರಯತ್ನಗಳನ್ನು ಈಗಾಗಲೇ ಮಾಡಿ ವಿಫಲವಾಗಿದ್ದಾರೆ. ಇದೇ ಆರಂಭವಲ್ಲ. ಅನೇಕ ವರ್ಷದಿಂದ ಮೊಸಳೆ ಈ ಸಮಸ್ಯೆಯನ್ನು ಎದುರಿಸುತ್ತಿದೆ. ಆದರೆ ಇತ್ತೀಚೆಗೆ ಮೊಸಳೆಯು ಬಾಯಿ ತೆರೆದು ಉಸಿರಾಡಲು ಶ್ರಮಪಡುತ್ತಿದ್ದ ವಿಡಿಯೋವೊಂದು ಬೆಳಕಿಗೆ ಬಂದ ಮೇಲೆ ಎಚ್ಚೆತ್ತ ಅಧಿಕಾರಿಗಳು ಹೀಗೆ ಬಿಟ್ಟರೆ ಟೈರ್ ನಿಧಾನವಾಗಿ ಪ್ರಾಣಿಯನ್ನು ಕೊಂದು ಬಿಡುತ್ತದೆ ಎಂಬುದನ್ನು ಮನಗಂಡು, ಹೇಗಾದರೂ ಮಾಡಿ ಟೈರ್ ತೆಗೆಯಲೇಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ.
ಹೀಗಾಗಿ ಸುಲಾವೆಸಿ ಪ್ರಾಂತ್ಯದ ಗವರ್ನರ್ ಇದಕ್ಕೆ ಅಂತ್ಯ ನೀಡಲು ಒಂದು ಯೋಜನೆ ರೂಪಿಸಿ ಎಂದು ಹೇಳಿದ ಬಳಿಕ, ಟೈರ್ ತೆಗೆದವರಿಗೆ ಬಹುಮಾನ ನೀಡುವ ಹೊಸ ಆಫರ್ ಘೋಷಣೆ ಮಾಡಲಾಗಿದೆ. ಪ್ರಾಣಿಗೆ ಯಾವುದೇ ಪ್ರಾಣ ಹಾನಿ ಮಾಡದೇ ಉಪಾಯವಾಗಿ ಟೈರ್ ಅನ್ನು ತೆಗೆದವರಿಗೆ ಒಳ್ಳೆಯ ನಗದು ಬಹುಮಾನವಂತೂ ಖಂಡಿತ ದೊರೆಯಲಿದೆ. (ಏಜೆನ್ಸೀಸ್)