ತಿರುವನಂತಪುರ: ಚೀನಾದಲ್ಲಿ ನೂರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿರುವ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು, ಕೇರಳದಲ್ಲಿ ಎರಡನೇ ಪ್ರಕರಣ ದಾಖಲಾಗಿದೆ.
ಮೂರು ದಿನಗಳ ಹಿಂದೆ ಕೇರಳದಲ್ಲಿ ವಿದ್ಯಾರ್ಥಿಯೊಬ್ಬನಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿತ್ತು. ಆ ವಿದ್ಯಾರ್ಥಿ ಚೀನಾದಿಂದ ಭಾರತಕ್ಕೆ ಬಂದಿದ್ದಾಗಿ ತಿಳಿಸಲಾಗಿತ್ತು. ಇದೀಗ ಎರಡನೇ ಪ್ರಕರಣ ಬೆಳಕಿಗೆ ಬಂದಿದೆ. ವೈರಸ್ ಹೊಂದಿರುವ ವ್ಯಕ್ತಿಯು ಚೀನಾದ ಪ್ರವಾಸ ಮುಗಿಸಿ ಭಾರತಕ್ಕೆ ಬಂದಿದ್ದರು ಎನ್ನಲಾಗಿದೆ. ಸದ್ಯ ರೋಗಿಯನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನಡೆಸಲಾಗುತ್ತಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕೇರಳದಲ್ಲಿ ಮೊದಲ ಕೊರೊನಾ ವೈರಸ್ ಪತ್ತೆಯಾದ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರು ಜನರನ್ನು ವೈರಸ್ ಪೀಡಿತರು ಎಂದು ಶಂಕಿಸಿ ವೈದ್ಯಕೀಯ ಪರೀಕ್ಷೆಗೆ ಗುರಿ ಪಡಿಸಲಾಗಿತ್ತು. ನಿನ್ನೆ ಮತ್ತಿಬ್ಬರಲ್ಲಿ ವೈರಸ್ನ ಗುಣಲಕ್ಷಣಗಳು ಕಂಡು ಬಂದಿದ್ದು, ಎಂಟೂ ಜನರನ್ನು ವೈದ್ಯಕೀಯ ಪರೀಕ್ಷೆಯಲ್ಲಿಡಲಾಗಿದೆ.
ಚೀನಾದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಪ್ರಕರಣಗಳು ಸಾಲು ಸಾಲಾಗಿ ಬೆಳಕಿಗೆ ಬರುತ್ತಿದ್ದು, 304 ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. 14,000ಕ್ಕೂ ಹೆಚ್ಚು ಜನರಲ್ಲಿ ವೈರಸ್ ಇರಬಹುದು ಎಂದು ಶಂಕಿಸಲಾಗಿದೆ. (ಏಜೆನ್ಸೀಸ್)