ಮುಂಬೈ: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆತಿಥೇಯ ಭಾರತ ಮತ್ತು ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಆಸಿಸ್ ಪಡೆಗೆ 256 ರನ್ ಗುರಿ ನೀಡಿದೆ.
ಟಾಸ್ ಸೋತು ಬ್ಯಾಂಟಿಂಗ್ಗೆ ಇಳಿದ ಟೀಮ್ ಇಂಡಿಯಾ ಆರಂಭದಲ್ಲೇ ರೋಹಿತ್ ಶರ್ಮ(10) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ಬಳಿಕ ಶಿಖರ್ ಧವನ್ ಜತೆಯಾದ ಕೆ.ಎಲ್.ರಾಹುಲ್ ಉತ್ತಮ ಜತೆಯಾಟವಾಗಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ತಂಡದ ಮೊತ್ತ 134 ರನ್ ಆಗಿದ್ದಾಗ 47 ರನ್ ಗಳಿಸಿ ಆಡುತ್ತಿದ್ದ ಕೆ.ಎಲ್.ರಾಹುಲ್ ಬಿರುಸಿನ ಆಟವಾಡಲು ಹೋಗಿ ಕ್ಯಾಚಿತ್ತು ಅರ್ಧ ಶತಕದ ಹೊಸ್ತಿಲಲ್ಲಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಧವನ್(74) ಕೂಡ ಔಟಾದರು.
ಇಲ್ಲಿಂದಾಚೆಗೆ ಪೆವಲಿಯನ್ ಪರೇಡ್ ನಡೆಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (16), ಶ್ರೇಯಸ್ ಅಯ್ಯರ್(4), ರಿಷಭ್ ಪಂತ್(28), ರವೀಂದ್ರ ಜಡೇಜ(25) ಶಾರ್ದೂಲ್ ಠಾಕೂರ್(13), ಕುಲದೀಪ್ ಯಾದವ್(17) ಮತ್ತು ಮಹಮ್ಮದ್ ಶಮಿ(10) ವಿಕೆಟ್ ಅನ್ನು ಬಹುಬೇಗನೆ ಕಳೆದುಕೊಂಡಿತು. ಕೊನೆಯಲ್ಲಿ ಯಾವುದೇ ರನ್ ಖಾತೆ ತೆರೆಯದೇ ಜಸ್ಪ್ರಿತ್ ಬೂಮ್ರಾ ಅಜೇಯರಾಗಿ ಉಳಿದರು.
ಅಂತಿಮ ವಾಗಿ ಟೀಮ್ ಇಂಡಿಯಾ 49.1 ಓವರ್ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 255 ರನ್ ಗಳಿಸಿತು.
ಆಸಿಸ್ ಪರ ಮಾರಕ ಬೌಲಿಂಗ್ ದಾಳಿ ಮಾಡಿದ ಮಿಚೆಲ್ ಸ್ಟಾರ್ಕ್ ಪ್ರಮುಖ 3 ವಿಕೆಟ್ ಕಬಳಿಸಿದರೆ, ಪ್ಯಾಟ್ ಕ್ಯೂಮಿನ್ಸ್ ಮತ್ತು ಕೇನ್ ರಿಚರ್ಡ್ಸನ್ ತಲಾ ಎರಡು ವಿಕೆಟ್ ಪಡೆದರು. ಉಳಿದಂತೆ ಆ್ಯಡಮ್ ಝಂಪಾ ಮತ್ತು ಅಸ್ಥಾನ್ ಅಗರ್ ತಲಾ ಒಂದು ವಿಕೆಟ್ಗೆ ತೃಪ್ತಿಪಟ್ಟರು. (ಏಜೆನ್ಸೀಸ್)