ನವದೆಹಲಿ: ಜಾಗತಿಕವಾಗಿ ತೈಲ ಬೆಲೆ ಕುಸಿತದ ಸಂಪೂರ್ಣ ಲಾಭ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಇದುವರೆಗೂ 32 ದಶಲಕ್ಷ ಟನ್ ತೈಲವನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ವಿಶ್ವದಲ್ಲಿ ಅತಿಹೆಚ್ಚು ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ.
ಕೋವಿಡ್ 19 ಲಾಕ್ಡೌನ್ನಂಥ ಸವಾಲುದಾಯಕ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡಿದ ಅವರು, ಲಾಕ್ಡೌನ್ನಿಂದಾಗಿ ಜಾಗತಿಕವಾಗಿ ತೈಲಕ್ಕೆ ದಿಢೀರನೆ ಬೇಡಿಕೆ ಕಡಿಮೆಯಾಯಿತು. ಇದರಿಂದಾಗಿ ಬೆಲೆ ಕಡಿಮೆಯಾಯಿತು. ಇಂಧನ ಕ್ಷೇತ್ರದಲ್ಲಿ ಇದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಹಿಂದೆಂದೂ ಈ ರೀತಿಯ ಬೆಳವಣಿಗೆಯನ್ನು ಕಂಡಿರಲಿಲ್ಲ. ಇದರಿಂದಾಗಿ ಜಾಗತಿಕವಾಗಿ ಕಚ್ಚಾ ತೈಲದ ಬೆಲೆ ಕುಸಿಯಿತು. ಅಮೆರಿಕದಲ್ಲಂತೂ ಬೆಲೆಗಳು ಮೈನಸ್ ಮಟ್ಟಕ್ಕೆ ಕುಸಿಯಿತು ಎಂದು ಹೇಳಿದರು.
ಇದನ್ನೂ ಓದಿ: ಮಾನವ ಕರುಳಿನಲ್ಲೂ ವೃದ್ಧಿಸುವ ಕರೊನಾ 19 ವೈರಾಣು
ಈ ಪರಿಸ್ಥಿತಿಯ ಲಾಭವನ್ನು ಸಂಪೂರ್ಣವಾಗಿ ತೆಗೆದುಕೊಳ್ಳಲು ಮುಂದಾದ ಭಾರತ ತನ್ನ ಸಂಗ್ರಹಗಾರಗಳೆಲ್ಲವನ್ನೂ ಭರ್ತಿ ಮಾಡಿಕೊಳ್ಳಲು ನಿರ್ಧರಿಸಿತು ಎಂದು ತಿಳಿಸಿದರು.
ಸೌದಿ ಅರೇಬಿಯಾ, ಯುಎಇ ಮತ್ತು ಇರಾಕ್ನಿಂದ ಒಟ್ಟಾತೆ 5.33 ದಶಲಕ್ಷ ಟನ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಯಿತು. ಬೇಡಿಕೆ ಮತ್ತು ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ವಿಮೆ ರೂಪದಲ್ಲಿ ಈ ಪ್ರಮಾಣದ ತೈಲವನ್ನು ಮಂಗಳೂರಿನ ಪದೂರು, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಭೂಗತ ಸಂಗ್ರಹಗಾರದಲ್ಲಿ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.
ಇದಲ್ಲದೆ 7 ದಶಲಕ್ಷ ಟನ್ ತೈಲ ಸಮುದ್ರದಲ್ಲಿರುವ ತೈಲ ಸಾಗಿಸುವ ನೌಕೆಗಳಲ್ಲಿ ಭರ್ತಿ ಮಾಡಲಾಗಿದೆ. ಅಂತೆಯೇ 25 ದಶಲಕ್ಷ ಟನ್ ತೈಲವನ್ನು ದೇಶದೊಳಗಿನ ತೈಲಸಂಗ್ರಹಗಾರಗಳಲ್ಲಿ ಟ್ಯಾಂಕ್ಗಳಲ್ಲಿ ಸಂಸ್ಕರಣಾ ಕೇಂದ್ರಗಳ ಪೈಪ್ಲೈನ್ಗಳಲ್ಲಿ ಮತ್ತು ಉತ್ಪನ್ನದ ಟ್ಯಾಂಕ್ಗಳಲ್ಲಿ ಭರ್ತಿ ಮಾಡಲಾಗಿದೆ ಎಂದು ತಿಳಿಸಿದರು.