ಬಳ್ಳಾರಿ: ಭಾರತ-ಪಾಕಿಸ್ತಾನ ಯುದ್ಧದಲ್ಲಿ ದೇಶ ವಿಜಯವಾಗಿ 50 ವರ್ಷವಾದ ಹಿನ್ನೆಲೆಯಲ್ಲಿ ಡಿ.11 ಮತ್ತು 12ರಂದು ಸ್ವರ್ಣಿಮ ವಿಜಯ ವರ್ಷವನ್ನಾಗಿ ಆಚರಿಸಲಾಗುತ್ತದೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸುಬೇದಾರ್ ಮೇಜರ್ ಕೆ.ಲಕ್ಷ್ಮಣ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1971ರಲ್ಲಿ ಪಾಕಿಸ್ತಾನ-ಭಾರತ ನಡುವೆ ನಡೆದ ಯುದ್ಧ ಭೀಕರತೆಯಿಂದ ಕೂಡಿತ್ತು. ಅದರಲ್ಲಿ ಪಾಕಿಸ್ತಾನದ 93 ಸಾವಿರ ಸೈನಿಕರನ್ನು ಭಾರತದ ಯೋಧರು ಬಂಧಿಸಿದರು. ಇದು ಎರಡನೇ ಮಹಾಯುದ್ಧದ ನಂತರ ಅತಿಹೆಚ್ಚು ಸೈನಿಕರನ್ನು ಬಂಧಿಸಲಾಗಿತ್ತು. ಇದರ ಜತೆ ಬಾಂಗ್ಲಾದೇಶ ಸ್ವತಂತ್ರಗೊಂಡಿತು. ಯುದ್ಧ ಗೆದ್ದು ಐವತ್ತು ವರ್ಷವಾದ ಹಿನ್ನೆಲೆಯಲ್ಲಿ ದೇಶಾದ್ಯಂತ ವಿಜಯೋತ್ಸವ ಆಚರಿಸಲಾಗುತ್ತದೆ. ಅದರಂತೆ, ಬಳ್ಳಾರಿಯಲ್ಲಿ ಡಿ.11ರಂದು ಸಂಜೆ 6 ಗಂಟೆಗೆ ರಾಯಲ್ ವೃತ್ತದಿಂದ ಬೆಂಗಳೂರು ರಸ್ತೆ ಮೂಲಕ ಮೋತಿ ವೃತ್ತದವರೆಗೆ ಪಂಜಿನ ಮೆರವಣಿಗೆ ನಡೆಸಲಾಗುತ್ತದೆ.
ಡಿ.12ರಂದು ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. 1971ರ ಯುದ್ದದಲ್ಲಿ ಭಾಗವಹಿಸಿದ್ದ ಸೈನಿಕರಿಗೆ ಸನ್ಮಾನಿಸಲಾಗುವುದು ಎಂದರು. ಮಾಜಿ ಸೈನಿಕರಾದ ಎ.ಬಿ.ಪ್ರತಾಪ್, ರಾಮಕೃಷ್ಣ, ಮಂಜುನಾಥ್ ಗೌಡ, ನಾಗರಾಜ್, ರಾಮನಾಥ್ ತೊಂಡರಾಮ್, ನಾಯಕ್ ಟಿ.ನರಸಯ್ಯ ಇತರರಿದ್ದರು.