ಇಂಡಿ: ರೇವಣ್ಣಸಿದ್ಧೇಶ್ವರ ಏತ ನೀರಾವರಿಗೆ ಆಗ್ರಹಿಸಿ ಝಳಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಬುಧವಾರ 9ನೇ ದಿನ ಪೂರೈಸಿತು.
ರೈತರು ಕೈಗೆ ಕಪ್ಪುಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ರೈತ ಮುಖಂಡ ಶ್ರೀಮಂತ ಕಾಪಸೆ ಮಾತನಾಡಿ, ನಾವು ಪ್ರತಿದಿನ ಎರಡು ಗ್ರಾಮಗಳ ರೈತರು ಈ ಹೋರಾಟದಲ್ಲಿ ಭಾಗವಹಿಸುತ್ತಿದ್ದು, ಧರಣಿಯಲ್ಲಿ 62 ಹಳ್ಳಿಗಳ ರೈತರು ಭಾಗವಹಿಸುತ್ತಾರೆ. ಈಗಾಗಲೇ 10 ಗ್ರಾಮಗಳ ರೈತರ ಪಾಳಿ ಮುಗಿದಿದೆ. ಇನ್ನೂ 52 ಗ್ರಾಮಗಳ ಸರದಿಯಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದರು.
ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನವಾದರೆ ಇಂಡಿ, ನಾಗಠಾಣ, ಬಬಲೇಶ್ವರ ಕ್ಷೇತ್ರದ ನೀರಾವರಿ ವಂಚಿತ 62 ಹಳ್ಳಿಗಳಿಗೆ ನೀರಾವರಿಯಾಗಲಿದೆ ಎಂದರು.
ಗುರುನಾಥ ಬಗಲಿ, ಮಲ್ಲಣ್ಣಗೌಡ ಪಾಟೀಲ, ಬಾಬುರಾಯಗೌಡ ಬಿರಾದಾರ, ಅನೀಲ ಚಟರಕಿ, ಭೀಮಾಶಂಕರ ಬಿರಾದಾರ, ವಿಠ್ಠಲ ಡೊಳ್ಳಿ, ಮಾಳಪ್ಪ ಅಚ್ಚಿಗಾವ, ಗಣಪತಿ ಠೋಕೆ, ಹಣಮಂತ ಪಾಟೀಲ, ಎ. ಎಂ. ಪಾಟೀಲ, ಮಹಾದೇವ ಗೌವಳಿ, ರಾಮಚಂದ್ರ ಕಾಪಸೆ, ಶ್ರೀಮಂತ ಶಿರಶ್ಯಾಡ, ಪ್ರಕಾಶ ಪಾಟೀಲ, ಹಣಮಂತ ಕೋಳಿ ಇದ್ದರು.