ನವದೆಹಲಿ: ಭಾನುವಾರ (ನ.19) ನಡೆಯಲಿರುವ ವಿಶ್ವಕಪ್ ಟೂರ್ನಿಯ ಫೈನಲ್ ಹಣಾಹಣಿಯನ್ನು ಕಣ್ತುಂಬಿಕೊಳ್ಳಲು ಕ್ರೀಡಾ ಜಗತ್ತೇ ಎದುರು ನೋಡುತ್ತಿದೆ. ಬಲಿಷ್ಠ ತಂಡಗಳಾದ ಆತಿಥೇಯ ಭಾರತ ಮತ್ತು ಐದು ಬಾರಿ ವಿಶ್ವಕಪ್ ಚಾಂಪಿಯನ್ಸ್ ಆಗಿರುವ ಆಸ್ಟ್ರೇಲಿಯಾ ನಡುವೆ ಟ್ರೋಫಿಗಾಗಿ ರೋಚಕ ಕದನ ನಡೆಯಲಿದ್ದು, ಯಾರಾಗ್ತಾರೆ ವಿಜಯಶಾಲಿ ಅನ್ನೋ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಲೆಕ್ಕಾಚಾರದ ಜತೆಗೆ ಜೋತಿಷ್ಯವೂ ಕೂಡ ಬಹಳ ಸದ್ದು ಮಾಡುತ್ತಿದೆ.
ಪಂಡಿತ ಜಗನ್ನಾಥ್ ಗುರೂಜಿ ಎಂಬುವರು ವಿಶ್ವಕಪ್ ಫೈನಲ್ ಬಗ್ಗೆ ನುಡಿದಿರುವ ಭವಿಷ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿದೆ.
ಜಗನ್ನಾಥ್ ಗುರೂಜಿ ಅವರ ಪ್ರಕಾರ ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ಕಡೆಯ ಜಾತಕಗಳನ್ನು ಹೋಲಿಕೆ ಮಾಡಿ ನೋಡಿದರೆ, ಟೀಮ್ ಇಂಡಿಯಾ, ಐಸಿಸಿ ವಿಶ್ವಕಪ್ 2023 ಟ್ರೋಫಿಯನ್ನು ಎತ್ತಿ ಹಿಡಿಯುವ ಎಲ್ಲ ಸಾಧ್ಯತೆಗಳು ಇವೆ. ಸದ್ಯದ ಮಟ್ಟಿಗೆ ಭಾರತದ ಜಾತಕ ಆಸ್ಟ್ರೇಲಿಯಾಗಿಂತ ಉತ್ತಮವಾಗಿದೆಯಂತೆ. ಇದು ಫೈನಲ್ ಪಂದ್ಯದಂದು ತಮ್ಮ ಎದುರಾಳಿಗಳನ್ನು ಸೋಲಿಸಲು ಭಾರತೀಯ ಆಟಗಾರರಲ್ಲಿ ಹೊಸ ಉತ್ಸಾಹ, ಶಕ್ತಿ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವವನ್ನು ಒದಗಿಸುತ್ತದೆ ಎಂದು ಜಗನ್ನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತೀಯ ಆಟಗಾರರ ಬಗ್ಗೆ ಮಾತನಾಡಿದ ಜಗನ್ನಾಥ್ ಗುರೂಜಿ, ನಾಯಕ ರೋಹಿತ್ ಶರ್ಮ ಅವರ ಜಾತಕ ಉತ್ತಮವಾಗಿದ್ದು, ಇದು ಅವರ ನಾಯಕತ್ವದ ಕೌಶಲ್ಯದಲ್ಲಿ ಅವರಿಗೆ ಸಹಾಯ ಮಾಡಿದೆ. ಅಲ್ಲದೆ, ರೋಹಿತ್ ಅವರ ಗ್ರಹಗತಿ 2011ರಲ್ಲಿ ವಿಶ್ವಕಪ್ ಎತ್ತಿಹಿಡಿದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಗ್ರಹಗತಯನ್ನು ಹೋಲುತ್ತದೆ. ಹೀಗಾಗಿ ನ.19ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವುದು ಖಚಿತ ಎನ್ನುತ್ತಾರೆ ಗುರೂಜಿ.
India poised to make history at ICC #WorldCup2023 in Ahmedabad on Sunday. 🇮🇳 Captain Rohit Sharma, guided by planetary alignments, set to lead the team to their 11th consecutive victory, clinching the World Champions title once more! 🏆#IndiaVSAustralia #PanditJagannathGuruji
— Pandit Jagannath Guruji (@GurujiJagannath) November 17, 2023
ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾರಂತಹ ಆಟಗಾರರ ಜಾತಕದಲ್ಲಿ ಯುರೇನಸ್, ಶುಕ್ರ ಮತ್ತು ನೆಪ್ಚೂನ್ ಬಲವಿದ್ದು, ವಿಶ್ವಕಪ್ ಫೈನಲ್ನಲ್ಲಿ ತಮ್ಮ ಪ್ರಭಾವವನ್ನು ಬೀರಿ ಇತಿಹಾಸವನ್ನು ಸೃಷ್ಟಿಸುವುದು ಖಚಿತ ಎಂಬುದರ ಸುಳಿವನ್ನು ನೀಡಿದೆ. ಆದರೆ, 8 ಮನೆಯಲ್ಲಿ ಮಂಗಳ ಗ್ರಹದ ಉಪಸ್ಥಿತಿ ಇರುವುದರಿಂದ ಭಾರತೀಯ ಆಟಗಾರರು ತಮ್ಮ ಬಲದ ಮೇಲಷ್ಟೇ ಗಮನ ಹರಿಸಬೇಕಿದ್ದು, ತಮಗೆ ಬಹುಮುಖ್ಯವಾಗಿ ಸವಾಲಾಗುವ ಅತಿಯಾದ ಆತ್ಮವಿಶ್ವಾಸವನ್ನು ಆದಷ್ಟು ನಿರ್ಲಕ್ಷಿಸಬೇಕೆಂದು ಜಗನ್ನಾಥ್ ಗುರೂಜಿ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ಆಟಗಾರರ ಜಾತಕವನ್ನು ನೋಡುವುದಾದರೆ, ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಜಾತಕದಲ್ಲಿ ಉತ್ತಮ ಗ್ರಹಗಳ ಜೋಡಣೆಯು ನಾಯಕತ್ವದ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಸುಳಿವು ನೀಡುತ್ತದೆ ಎಂದು ಜಗನ್ನಾಥ್ ಗುರೂಜಿ ಹೇಳುತ್ತಾರೆ. ಆದಾಗ್ಯೂ ರೋಹಿತ್ ಅವರ ಜಾತಕದೊಂದಿಗೆ ಹೋಲಿಸಿದಾಗ, ಹಿಟ್ಮ್ಯಾನ್ ಬಹುಶಃ ಎಲ್ಲ ಅಂಶಗಳಲ್ಲಿ ಆಸೀಸ್ ನಾಯಕನನ್ನು ಮೀರಿಸುವ ಸಾಧ್ಯತೆಯಿದೆ. ಇದೇ ವೇಳೆ ಆಸ್ಟ್ರೇಲಿಯಾ ಕಡೆಯಿಂದ ಫೈನಲ್ ಪಂದ್ಯದಲ್ಲಿ ತುಂಬಾ ಪ್ರಭಾವ ಬೀರುವ ಆಟಗಾರರೆಂದರೆ, ಟ್ರಾವಿಸ್ ಹೆಡ್, ಮಿಚೆಲ್. ಮಾರ್ಷ್, ಆ್ಯಡಂ ಝಂಪಾ, ಮಿಚೆಲ್ ಸ್ಟಾರ್ಕ್ ಮತ್ತು ಮಾರ್ನಸ್ ಲಬುಸೇನ್.
ನ.19ಕ್ಕೆ ಫೈನಲ್
ಫೈನಲ್ಗೆ ಲಗ್ಗೆ ಇಟ್ಟಿರುವ ಭಾರತ ಮತ್ತು ಆಸ್ಟ್ರೇಲಿಯಾ ನ. 19ರಂದು ಗುಜರಾತಿನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ಸೆಣಸಾಡಲಿವೆ. ಗೆಲ್ಲುವ ತಂಡ ವಿಶ್ವಕಪ್ ಟ್ರೋಫಿಯ ಜತೆಗೆ 4 ಮಿಲಿಯನ್ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್ ಅಪ್ ತಂಡಗಳು 2 ಮಿಲಿಯನ್ ಡಾಲರ್ ಬಹುಮಾನ ಮೊತ್ತ ಹಾಗೂ ಲೀಗ್ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್)
ಅವಕಾಶಕ್ಕಾಗಿ ಏನನ್ನೂ ಬಿಡ್ಬೇಡಿ! ಫೈನಲ್ಗೂ ಮುನ್ನವೇ ಆಸಿಸ್ ವಿರುದ್ಧ ಐಸ್ಲ್ಯಾಂಡ್ ಕ್ರಿಕೆಟ್ ವಾಗ್ದಾಳಿ