ಮುಂಡಗೋಡ: ಪಟ್ಟಣ ವ್ಯಾಪ್ತಿಯಲ್ಲಿ ವಾಮಾಚಾರ ಮಾಡಿ ಲಿಂಬೆಹಣ್ಣು, ಕುಂಕುಮ, ಚಿಲ್ಲರೆ ಹಣ, ಬಾಳೆ ಹಣ್ಣುಗಳನ್ನು ರಸ್ತೆ ಮೇಲೆ ಇಡುತ್ತಿರುವುದು ದಿನೇದಿನೆ ಹೆಚ್ಚಾಗುತ್ತಿದೆ. ಇದು ಜನರಲ್ಲಿ ಆತಂಕ ಹಾಗೂ ಬೇಸರ ಮೂಡಿಸಿದೆ. ಇತ್ತೀಚೆಗೆ ಆನಂದನಗರ, ಇಂದ್ರಾನಗರ ಬಡಾವಣೆ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ವಾಮಾಚಾರ ಮಾಡಿಸಿ ಇಡುತ್ತಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ರಸ್ತೆಗಳಲ್ಲಿಟ್ಟ ಲಿಂಬೆಹಣ್ಣು, ಚಿಲ್ಲರೆ ಹಣವನು ಮಕ್ಕಳು ತೆಗೆದುಕೊಂಡು ಹೋಗುತ್ತಿದ್ದಾರೆ. ಬಳಿಕ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ಪಟ್ಟಣದ ಕಾಳಗನಕೊಪ್ಪ ಕ್ರಾಸ್ ಬಳಿಯ ಶಿವರಾಜ ಬೈಕ್ ಶೋ ರೂಂ ಬಳಿ ವಾಮಾಚಾರದ ವಸ್ತುಗಳನ್ನು ಇಟ್ಟಿದ್ದಾರೆ.