ಹೈದರಾಬಾದ್: ಪ್ಲೇಆಫ್ ರೇಸ್ನಲ್ಲಿ ಮೇಲುಗೈ ಸಾಧಿಸಲು ಗೆಲುವಿನ ಅನಿವಾರ್ಯತೆಯಲ್ಲಿರುವ ತಂಡಗಳಾದ ಸನ್ರೈಸರ್ಸ್ ಹೈದರಾಬಾದ್ ಮತ್ತು ಲಖನೌ ಸೂಪರ್ಜೈಂಟ್ಸ್, ಐಪಿಎಲ್-17ರಲ್ಲಿ ಬುಧವಾರ ಸೆಣಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಪ್ಲೇಆಫ್ ಸನಿಹ ತಲುಪಲಿದ್ದರೆ, ಸೋತ ತಂಡದ ಹಾದಿ ಕಠಿಣವಾಗಲಿದೆ.
ಉಭಯ ತಂಡಗಳು ಇದುವರೆಗೆ ಆಡಿರುವ ತಲಾ 11 ಪಂದ್ಯಗಳಲ್ಲಿ ತಲಾ 6 ಜಯ ಮತ್ತು 5 ಸೋಲಿನೊಂದಿಗೆ ಒಂದೇ ಸ್ಥಿತಿಯಲ್ಲಿವೆ. ಆದರೆ ಸನ್ರೈಸರ್ಸ್ ತಂಡ ರನ್ರೇಟ್ನಲ್ಲಿ ಅಲ್ಪ ಮುನ್ನಡೆ ಸಾಧಿಸಿದೆ. ಉಭಯ ತಂಡಗಳು ಕಳೆದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದು, ಪುಟಿದೇಳುವ ಹಂಬಲದಲ್ಲಿವೆ.
ಲಖನೌ ತಂಡ ಕೆಕೆಆರ್ ವಿರುದ್ಧ 98 ರನ್ಗಳಿಂದ ಸೋತು ಲಯ ತಪ್ಪಿದ್ದರೆ, ಸನ್ರೈಸರ್ಸ್ ತಂಡ ಮುಂಬೈ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದರೂ ರನ್ ಪ್ರವಾಹ ಹರಿಸಲಾಗದೆ 7 ವಿಕೆಟ್ಗಳಿಂದ ಸೋತಿತ್ತು. ಹೀಗಾಗಿ ಪ್ಲೇಆಫ್ ರೇಸ್ನಲ್ಲಿ ಅವಕಾಶ ವೃದ್ಧಿಸಿಕೊಳ್ಳಲು ಉಭಯ ತಂಡಗಳಿಗೂ ಗೆಲುವಿನ ಅಗತ್ಯವಿದೆ. ಕೆಎಲ್ ರಾಹುಲ್ ಪಡೆ ಗೆದ್ದರೆ ಅಂಕಪಟ್ಟಿಯಲ್ಲಿ ಅಗ್ರ 4ರೊಳಗೆ ಮರಳಿ 3ನೇ ಸ್ಥಾನಕ್ಕೇರುವ ಅವಕಾಶ ಹೊಂದಿದೆ.
ಏಕೈಕ ಮುಖಾಮುಖಿ
ಲಖನೌ&ಸನ್ರೈಸರ್ಸ್ ತಂಡಗಳು ಹಾಲಿ ಆವೃತ್ತಿಯ ಲೀಗ್ ಹಂತದಲ್ಲಿ ಏಕಮಾತ್ರ ಬಾರಿ ಮುಖಾಮುಖಿ ಆಗುತ್ತಿವೆ. ಕಳೆದ 2 ಆವೃತ್ತಿಗಳಲ್ಲಿ ಉಭಯ ತಂಡಗಳು 3 ಬಾರಿ ಮುಖಾಮುಖಿ ಆಗಿದ್ದು, 3ರಲ್ಲೂ ಲಖನೌ ತಂಡವೇ ಗೆದ್ದು ಅಜೇಯವಾಗಿದೆ. ಹೀಗಾಗಿ ಸನ್ರೈಸರ್ಸ್ ಪ್ಲೇಆಫ್ ಆಸೆ ಹೆಚ್ಚಿಸಲು ಈ ಇತಿಹಾಸವನ್ನು ಬದಲಾಯಿಸಬೇಕಾದ ಅಗತ್ಯವಿದೆ.
ಪ್ಲೇಆಫ್ ಲೆಕ್ಕಾಚಾರ…
ಉಭಯ ತಂಡಗಳಿಗೂ ಇನ್ನು 3 ಪಂದ್ಯ ಬಾಕಿ ಇದ್ದು, ಈ 3ರಲ್ಲೂ ಗೆದ್ದರೆ ಬೇರಾವ ಲೆಕ್ಕಾಚಾರವೂ ಅಗತ್ಯವಿಲ್ಲದೆ 18 ಅಂಕಗಳೊಂದಿಗೆ ಸರಾಗವಾಗಿ ಪ್ಲೇಆ್ಗೇರಲಿವೆ. 2 ಪಂದ್ಯ ಗೆದ್ದರೂ ಪ್ಲೇಆಫ್ ಅವಕಾಶವಿದೆ. ಆಗ ರನ್ರೇಟ್ನಲ್ಲೂ ಮೇಲುಗೈ ಸಾಧಿಸುವ ಅಗತ್ಯ ಎದುರಾಗಬಹುದು. ಇನ್ನು ಉಳಿದ 1 ಪಂದ್ಯ ಮಾತ್ರ ಗೆದ್ದರೆ, ಆಗ ಇತರ ಲಿತಾಂಶಗಳೂ ಅನುಕೂಲಕರವಾಗಿ ಬರಬೇಕಾದ ಮತ್ತು ರನ್ರೇಟ್ನಲ್ಲಿ ಮೇಲುಗೈ ಸಾಧಿಸಬೇಕಾದ ಒತ್ತಡ ಎದುರಾಗಲಿದೆ. ಉಳಿದ 3ರಲ್ಲೂ ಸೋತರೆ ಪ್ಲೇಆಫ್ ಆಸೆ ಭಗೊಳ್ಳಲಿದೆ. ಸದ್ಯ ಸನ್-ಲಖನೌ ಎರಡೂ ತಂಡಗಳ ರನ್ರೇಟ್ ಮೈನಸ್ನಲ್ಲಿವೆ. ಹೀಗಾಗಿ ದೊಡ್ಡ ಅಂತರದಿಂದ ಗೆದ್ದರೆ ಉಭಯ ತಂಡಗಳಿಗೂ ಹೆಚ್ಚಿನ ಅನುಕೂಲತೆಗಳಿವೆ. ಲಖನೌ ತಂಡ ಡೆಲ್ಲಿ (ಮೇ 14), ಮುಂಬೈ (ಮೇ 17) ವಿರುದ್ಧ ಮತ್ತು ಸನ್ರೈಸರ್ಸ್ ತಂಡ ಗುಜರಾತ್ (ಮೇ 16), ಪಂಜಾಬ್ (ಮೇ 19) ವಿರುದ್ಧ ತನ್ನ ಕೊನೇ 2 ಪಂದ್ಯಗಳನ್ನು ಆಡಲಿದೆ.
ಮುಖಾಮುಖಿ: 3
ಲಖನೌ: 3
ಸನ್ರೈಸರ್ಸ್: 0
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋಸಿನಿಮಾ.
ಸನ್ ಪವರ್ ಕಟ್!
ಪ್ಯಾಟ್ ಕಮ್ಮಿನ್ಸ್ ಬಳಗ ಪವರ್ಪ್ಲೇನಲ್ಲೇ ಅಬ್ಬರಿಸುತ್ತ ಬಹುತೇಕ ಪಂದ್ಯ ವಶಪಡಿಸಿಕೊಳ್ಳುವ ಮೂಲಕ ಗಮನಸೆಳೆದಿತ್ತು. ಆದರೆ ಕಳೆದ ಕೆಲ ಪಂದ್ಯಗಳಿಂದ ಪವರ್ಪ್ಲೇನಲ್ಲೇ ಪವರ್ ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಸನ್ರೈಸರ್ಸ್ ಯಶಸ್ಸಿಗೆ ಪವರ್ಪ್ಲೇನಲ್ಲೇ ಸ್ಫೋಟಿಸುವುದು ಅನಿವಾರ್ಯವೆನಿಸಿದೆ. ಸನ್ರೈಸರ್ಸ್ ತಾನಾಡಿರುವ ಕಳೆದ 4 ಪಂದ್ಯಗಳಲ್ಲಿ 3ರಲ್ಲಿ ಸೋತು ಒತ್ತಡದಲ್ಲಿದೆ. ಬ್ಯಾಟಿಂಗ್ ವಿಭಾಗ ಕೈಕೊಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣವೆನಿಸಿದೆ. ಪ್ರಮುಖವಾಗಿ ಟ್ರಾವಿಸ್ ಹೆಡ್, ಅಭಿಷೇಕ್ ವರ್ಮ, ಹೆನ್ರಿಕ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ ಆಟವನ್ನೇ ಸನ್ ಅವಲಂಬಿಸಿದೆ. ಬೌಲಿಂಗ್ ವಿಭಾಗದಲ್ಲಿ ಕಮ್ಮಿನ್ಸ್ ಪಡೆ ಹೆಚ್ಚಿನ ವೈವಿಧ್ಯತೆ ಹೊಂದಿದೆ.
ಲಖನೌಗೆ ಲಕ್ ನಿರೀಕ್ಷೆ
ಲಖನೌ ತಂಡ ತನ್ನ ಕೊನೇ 3 ಲೀಗ್ ಪಂದ್ಯಗಳನ್ನು ಎದುರಾಳಿ ನೆಲದಲ್ಲೇ ಆಡಲಿದೆ. ಇದು ಪ್ಲೇಆ್ ಸವಾಲನ್ನು ತುಸು ಕಠಿಣಗೊಳಿಸಿದೆ. ಕೆಕೆಆರ್ ವಿರುದ್ಧದ ಕಳೆದ ಪಂದ್ಯದಲ್ಲಿ ತವರಿನಲ್ಲೇ 200 ಪ್ಲಸ್ ಮೊತ್ತ ಬಿಟ್ಟುಕೊಟ್ಟಿದ್ದ ಎಲ್ಎಸ್ಜಿ ಬಳಿಕ ಬ್ಯಾಟಿಂಗ್ನಲ್ಲಿ ದಯನೀಯ ವೈಫಲ್ಯ ಅನುಭವಿಸಿತ್ತು. ಇದರಿಂದ ಪುಟಿದೆದ್ದು ಬರಬೇಕಾದರೆ ನಾಯಕ ಕೆಎಲ್ ರಾಹುಲ್, ಮಾರ್ಕಸ್ ಸ್ಟೋಯಿನಿಸ್ ಮತ್ತು ನಿಕೋಲಸ್ ಪೂರನ್ ಇನ್ನಷ್ಟು ಜವಾಬ್ದಾರಿಯುತ ಆಟವಾಡುವುದು ಅಗತ್ಯವಾಗಿದೆ. ಬೌಲಿಂಗ್ ವಿಭಾಗದಲ್ಲಿ ಯುವ ವೇಗಿ ಮಯಾಂಕ್ ಯಾದವ್ ಮತ್ತು ಮೊಹ್ಸಿನ್ ಖಾನ್ ಗಾಯದ ಸಮಸ್ಯೆ ತಂಡಕ್ಕೆ ಹಿನ್ನಡೆ ತಂದಿದೆ.
ಅನಾರೋಗ್ಯದ ನಡುವೆಯೂ ಆಡಿ ಆರ್ಸಿಬಿ ಗೆಲುವಿನ ರೂವಾರಿ ಎನಿಸಿದ ಮೊಹಮದ್ ಸಿರಾಜ್!