ಹುಬ್ಬಳ್ಳಿ : ಇಲ್ಲಿನ ನವನಗರದಲ್ಲಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಆಶ್ರಯದಲ್ಲಿ ಗುರುವಾರದಂದು ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಉದ್ಘಾಟನೆ ಜರುಗಿತು.
ರಾಜ್ಯದ 16 ವಿಶ್ವವಿದ್ಯಾಲಯಗಳ ಹಾಗೂ ಐದು ಹೊರ ರಾಜ್ಯಗಳ ಸುಮಾರು 150ಕ್ಕೂ ಹೆಚ್ಚು ಶಿಬಿರಾರ್ತಿಗಳು ಮತ್ತು ಸಂಯೋಜಾಧಿಕಾರಿಗಳು ಭಾಗವಹಿಸಿದ್ದರು.
ಶಿಬಿರ ಉದ್ಘಾಟಿಸಿ ಮಾತನಾಡಿದ ರಾಜ್ಯ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಸಗ್ರೇಶಿ, ರಾಷ್ಟ್ರ ನಿರ್ವಣಕ್ಕೆ ಎನ್.ಎಸ್.ಎಸ್. ಸೇವೆ ಅವಶ್ಯಕ. ವೈವಿಧ್ಯತೆಯನ್ನು ಐಕ್ಯತೆಗೊಳಿಸುವ ಗುರಿ ಹೊಂದಿದೆ ಎಂದರು.
ಮಹಾತ್ಮಾ ಗಾಂಧೀಜಿಯವರ ಗ್ರಾಮೀಣ ಭಾರತದ ಕನಸು ಈಡೇರಿಸುವ ಛಲದೊಂದಿಗೆ ಎನ್.ಎಸ್.ಎಸ್. ಶಿಬಿರಾರ್ಥಿಗಳ ನಿಶ್ವಾರ್ಥ ಸೇವೆ ಸಲ್ಲಿಸಿದಾಗ ರಾಷ್ಟ್ರದ ಭಾವೈಕ್ಯತೆಯ ಸಂಕಲ್ಪ ಈಡೇರುವುದು ಎಂದು ಹೇಳಿದರು.
ಅತಿಥಿಯಾಗಿದ್ದ ರಾಜ್ಯ ಎನ್ಎಸ್ಎಸ್ ಅಧಿಕಾರಿ ಡಾ. ಪ್ರತಾಪ ಲಿಂಗಯ್ಯ ಮಾತನಾಡಿ, ಧರ್ಮ, ಭಾಷೆ, ಆಚಾರ-ವಿಚಾರ, ಆಹಾರ, ಉಡುಗೆ-ತೊಡುಗೆ, ಭಿನ್ನವಾಗಿದ್ದಾಗಿಯೂ ಇಂತಹ ರಾಷ್ಟ್ರೀಯ ಸೇವಾ ಯೋಜನೆಗಳು ಪರಸ್ಪರನ್ನು ಒಂದೆಡೆ ಸೇರಿಸುವುದರಿಂದ ಸಂಸ್ಕೃತಿಯು ಸಮ್ಮೀಲನಗೊಂಡು, ನಮ್ಮ ಐತಿಹಾಸಿಕ ಪರಂಪರೆಯ ಸಂಸ್ಕೃತಿಯ ಅನಾರವಣ ಸಾಧ್ಯ ಮತ್ತು ನಮ್ಮಲ್ಲಿ ಐಕ್ಯತಾ ಮನೋಭಾವ ಬೆಳೆಯುತ್ತದೆ ಎಂದರು.
ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಸತೀಶಗೌಡ ಎನ್. ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ನಾಗರೀಕ ಪ್ರಜ್ಞೆಯನ್ನು ಮೂಡಿಸುವುದುರ ಜತೆಗೆ ಬಸವಣ್ಣನವರ ಕಾಯಕದ ಪರಿಕಲ್ಪನೆಯನ್ನು ಯುವ ಸಮೂಹಕ್ಕೆ ಮನವರೆಕೆ ಮಾಡಿಕೊಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾನೂನು ವಿವಿ ಕುಲಪತಿ ಡಾ. ಸಿ. ಬಸವರಾಜು, ಈ ರಾಷ್ಟ್ರದ ಭಾವೈಕ್ಯತೆ, ಸಾಮರಸ್ಯ, ಸಹೋದರತ್ವ, ಸಹಿಷ್ಣುತೆಯನ್ನು ಸಂಸ್ಥಾಪಿಸುವ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂದು ತಿಳಿಸಿದರು.
ವಿಶೇಷ ಉಪನ್ಯಾಸ ಗೋಷ್ಠಿಯಲ್ಲಿ ಡಾ. ಸತೀಶಗೌಡ ಎನ್. ಮಾತನಾಡಿದರು. ವೇದಿಕೆಯಲ್ಲಿ ಡೀನ್ ಪ್ರೊ. ಜಿ.ಬಿ. ಪಾಟೀಲ, ಕುಲಸಚಿವರಾದ ಪ್ರೊ. ರತ್ನಾ ಭರಮಗೌಡರ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಐ.ಬಿ. ಬಿರಾದರ ಉಪಸ್ಥಿತರಿದ್ದರು.