ಬಸವಕಲ್ಯಾಣ: ವಚನಗಳು ಬೌದ್ಧಿಕ ಮತ್ತು ಸಾಂಸ್ಕೃತಿಕ ಪಠ್ಯಗಳಾಗಿವೆ. ಪಠ್ಯಗಳು ಮನುಷ್ಯನ ಜತೆ ಒಡನಾಡಿಯಾದಾಗ ಜೀವಂತಿಕೆ ಮತ್ತು ಬಲ ಬರುತ್ತದೆ. ಪಠ್ಯಗಳು ಸಾಂಸ್ಕೃತಿಕ ರಾಜಕಾರಣದ ಭಾಗವೂ ಆಗಿವೆ ಎಂದು ತುಮಕೂರು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಪ್ರೊ.ಎನ್.ಎಸ್. ಗುಂಡೂರ ಹೇಳಿದರು.
ನಗರದ ಶಾಂತಿನಿಕೇತನ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಡಾ.ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ೭೮ನೇ ಉಪನ್ಯಾಸ ಮಾಲೆಯಲ್ಲಿ ಜ್ಞಾನ ಮತ್ತು ಅಧಿಕಾರ ಮೀಮಾಂಸೆ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಅವರು, ಪಠ್ಯಗಳು ಕೇವಲ ಓದಿ ಪರೀಕ್ಷೆ ಬರೆಯುವ ಪರಿಕರಗಳಲ್ಲ. ಅವು ಸಾಂಸ್ಕೃತಿಕ ರಾಜಕಾರಣ ನಿರ್ಧರಿಸುವ ಶಕ್ತಿಗಳು ಎಂದು ವಿಶ್ಲೇಷಿಸಿದರು.
ಮುದ್ರಣ ಸಂಸ್ಕೃತಿ ಶುರುವಾದ ಬಳಿಕ ವಚನ ಸಂಗ್ರಹ ಸಂಪಾದನೆ, ವ್ಯಾಖ್ಯಾನ ವಿಶ್ಲೇಷಣೆಗಳು ನಡೆದವು. ಹಳಕಟ್ಟಿ, ಪಾವಟೆ, ಎಂ.ಎಂ. ಕಲಬುರ್ಗಿ ಮೊದಲಾದವರು ಕರ್ನಾಟಕ ವಿಶ್ವವಿದ್ಯಾಲಯದಿಂದ ವಚನ ಸಾಂಸ್ಕೃತಿಕ ಪರಿಸರ ಸೃಷ್ಟಿಸಲು ಶ್ರಮಿಸಿದರು. ಮನುಷ್ಯ, ಪಠ್ಯ ಮತ್ತು ಸಂಸ್ಕೃತಿ ಜತೆಗೆ ಅಧಿಕಾರದ ರಚನೆ ಮತ್ತು ಸಂಬಂಧ ಇದ್ದೇ ಇರುತ್ತದೆ ಎಂದರು.
ಸಿಯುಕೆ ಪ್ರಾಧ್ಯಾಪಕ ಡಾ.ಮಹೇಂದ್ರ ಎಂ. ಮಾತನಾಡಿ, ಅಧಿಕಾರ ಎಂಬುದು ಬಹು ಸೂಕ್ಷ್ಮತೆಯಿಂದ ಕೂಡಿರುತ್ತದೆ. ಹಣದ ದರ್ಪ, ರಾಜಕೀಯ ಪ್ರಾಧ್ಯಾನ್ಯವೂ ಅಧಿಕಾರವಾಗಿ ಗ್ರಹಿಸಿದ್ದೇವೆ. ಎರಡು ಗುಂಪುಗಳ ನಡುವಿನ ಕದನ ಚರಿತ್ರೆಯಾಯಿತು. ಮಾರ್ಕ್ಸ್ ನಿರೂಪಿತ ಅಧಿಕಾರಕ್ಕಿಂತ ಮಿಶೆಲ್ ಫುಕೋ ನಿರೂಪಿತ ಅಧಿಕಾರ ಸೂಕ್ಷ್ಮವಾಗಿದೆ. ಅಧಿಕಾರ ಮನುಷ್ಯನ ಒಳಸ್ತರದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಿರೂಪಿಸುತ್ತದೆ ಎಂದು ಹೇಳಿದರು.
ಡಾ.ಭೀಮಾಶಂಕರ ಬಿರಾದಾರ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ. ಹುಡೇದ ಅಧ್ಯಕ್ಷತೆ ವಹಿಸಿದ್ದರು. ಬಿಡಿಪಿಸಿ ನಿರ್ದೇಶಕ ಮಲ್ಲಯ್ಯ ಹಿರೇಮಠ, ಪವಿತ್ರಾ ಗಿರಗಂಟೆ, ನಾಗೇಂದ್ರ ಬಿರಾದಾರ, ರವಿ ಕೊಳಕೂರ, ಚಂದ್ರಕಾಂತ ಅಕ್ಕಣ್ಣ, ನಾಗಪ್ಪ ನಿಣ್ಣೆ, ಶರಣು ಬಿರಾದಾರ, ಮೀನಾಕ್ಷಿ ಬಿರಾದಾರ, ಚನ್ನವೀರ ಜಮಾದಾರ, ಶಾಲಿವಾನ ಕಾಕನಾಳೆ, ಮಾಣಿಕಪ್ಪ ಸಂಗನಬಟ್ಟೆ ಇತರರಿದ್ದರು.
ಡಾ.ಶಿವಾಜಿ ಮೇತ್ರೆ ಸ್ವಾಗತಿಸಿದರು. ಡಾ.ರವೀಂದ್ರನಾಥ ನಾರಾಯಣಪುರ ವಂದಿಸಿದರು. ದೇವೇಂದ್ರ ಬರಗಾಲೆ ನಿರೂಪಣೆ ಮಾಡಿದರು.