ಕುಶಾಲನಗರ: ಮುಳ್ಳುಸೋಗೆ ಗ್ರಾಮದ ಕಾವೇರಿ ನದಿದಂಡೆಯ ತೋಟಗಳು ಪ್ರತಿವರ್ಷ ಪ್ರವಾಹಕ್ಕೆ ತುತ್ತಾಗುತ್ತಿವೆ.
ಪ್ರವಾಹದಿಂದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ ಅವರ ತೋಟದಲ್ಲಿ ಹತ್ತು ಸಾವಿರಕ್ಕೂ ಅಧಿಕ ಕರಿಮೆಣಸು ಬಳ್ಳಿಗಳು ನಾಶವಾಗಿ, ವಾರ್ಷಿಕ 18 ರಿಂದ 25 ಲಕ್ಷ ರೂ. ನಷ್ಟವಾಗಿದೆ. ಕೆ.ಪಿ.ಚಂದ್ರಕಲಾ ನದಿದಂಡೆಯ ಹತ್ತಾರು ಎಕರೆಯ ಕಾಫಿ ತೋಟದಲ್ಲಿ ಪ್ರತಿವರ್ಷ ಉತ್ತಮ ಕರಿಮೆಣಸು ಫಸಲು ತೆಗೆಯುತ್ತಿದ್ದರು. ಆದರೆ, ಕಳೆದ ಮೂರು ವರ್ಷದಿಂದ ಪ್ರವಾಹಕ್ಕೆ ಸಿಲುಕಿ ತೋಟಗಾರಿಕಾ ಬೆಳೆಗಳು ಹಾಳಾಗುತ್ತಿವೆ.
ಆದ್ದರಿಂದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕಾವೇರಿ ನದಿದಂಡೆಯ ಹಾನಿಯಾದ ತೋಟಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕು. ಜತೆಗೆ ಕರಿಮೆಣಸು ಬಳ್ಳಿಗಳನ್ನು ಉಚಿತವಾಗಿ ನೆರೆ ಸಂತ್ರಸ್ತ ಕೃಷಿಕರಿಗೆ ಒದಗಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್.ಶಿವಾನಂದ ಒತ್ತಾಯಿಸಿದ್ದಾರೆ.