ರಾಣೆಬೆನ್ನೂರ: ಮುಂಬೈಗೆ ಕೂಲಿ ಕೆಲಸಕ್ಕಾಗಿ ಹೋಗಿದ್ದ ರಾಣೆಬೆನ್ನೂರಿನ ತುಮ್ಮಿನಕಟ್ಟಿ ಹಾಗೂ ಮಾಕನೂರ ಗ್ರಾಮದ 88 ಜನರು ಸೋಮವಾರ ರಾತ್ರಿ ವಾಪಸ್ ಬಂದಿದ್ದಾರೆ. ಅವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಅವರ ಸುರಕ್ಷತೆಗಾಗಿ ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದರೂ, ಬೇರೆ ಯಾರದ್ದೋ ಉಪಕಾರಕ್ಕೆ ತಾವು ಕ್ವಾರಂಟೈನ್ಗೆ ಒಳಗಾದವರಂತೆ ಆಡುತ್ತಿದ್ದಾರೆ.
ಈಶ್ವರ ನಗರದಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ನಲ್ಲಿ 41 ಜನರನ್ನು ಹಾಗೂ ಮಾಕನೂರ ಬಳಿಯ ಮುರಾರ್ಜಿ ದೇಸಾಯಿ ವಸತಿಯುತ ಶಾಲೆಯಲ್ಲಿ 47 ಜನರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಇವರೆಲ್ಲರೂ ಮುಂಬೈನಲ್ಲಿ ಕೂಲಿ ಕೆಲಸ, ಬೀದಿಬದಿಯಲ್ಲಿ ಪಿನ್ನು ಮತ್ತಿತರ ವಸ್ತುಗಳನ್ನು ಮಾರಾಟ ಮಾಡಿ ಹೊಟ್ಟೆಹೊರೆಯುತ್ತಿದ್ದವರು. ಇವರನ್ನು ಸ್ವತಃ ತುಮ್ಮಿನಕಟ್ಟಿ ಹಾಗೂ ಮಾಕನೂರಿನ ಜನತೆಯೇ ದೂರ ಇಟ್ಟಿದ್ದಾರೆ. ಹೋಂ ಕ್ವಾರಂಟೈನ್ ಮಾಡಲೂ ಗ್ರಾಮದೊಳಗೂ ಬಿಟ್ಟುಕೊಂಡಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕ್ವಾರಂಟೈನ್ ಕೇಂದ್ರದಲ್ಲಿ ರಾತ್ರಿ ಭರ್ಜರಿ ನೃತ್ಯ ಪ್ರದರ್ಶನ; ಜಿಲ್ಲಾಡಳಿತ ಕೆಂಡಾಮಂಡಲ
ಆದರೂ ಈ 88 ಜನರಲ್ಲಿ ಕೆಲವರ ಬೇಡಿಕೆಗಳು ಯಾವ ಶ್ರೀಮಂತರಿಗೂ ಕಡಿಮೆಯಿಲ್ಲ ಎನ್ನಲಾಗುತ್ತಿದೆ. ‘ನಮಗೆ ಹಾಸ್ಟೆಲ್ ಊಟ ಬೇಡ. ಬಾಸುಮತಿ ಅಕ್ಕಿಯಿಂದ ಮಾಡಿದ ಅನ್ನ ಕೊಡಬೇಕು. ಪಡಿತರ ಅಕ್ಕಿಯ ಅನ್ನ ಊಟ ಮಾಡಲ್ಲ’ ಎಂದು ಹಾಸ್ಟೆಲ್ಗಳ ವಾರ್ಡನ್ ಜತೆಗೆ ಕ್ಯಾತೆ ತೆಗೆದು ಗಲಾಟೆ ಮಾಡಿದ್ದಾರೆ. ಅಲ್ಲದೆ, ಹಾಸ್ಟೆಲ್ನಿಂದ ಹೊರ ಹೋಗುವ ಬೆದರಿಕೆ ಹಾಕುತ್ತಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು, ಸರ್ಕಾರದ ಮಾರ್ಗಸೂಚಿ ಪ್ರಕಾರ ಊಟ-ವಸತಿ ಕಲ್ಪಿಸಲಾಗಿದೆ. ನೀವು ಕೇಳಿದ ಉನ್ನತ ಮಟ್ಟದ ಸೌಲಭ್ಯ ಲಾಡ್ಜ್ ಕ್ವಾರಂಟೈನ್ನಲ್ಲಿ ಸಿಗುತ್ತೆ. ಅಲ್ಲಿ ದುಡ್ಡು ಕೊಟ್ಟು ಇರಬಹುದು. ಇದನ್ನು ಹೊರತುಪಡಿಸಿ ಕ್ವಾರಂಟೈನ್ನಿಂದ ಹೊರಹೋಗುವ ಬೆದರಿಕೆ ಹಾಕಿದರೆ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ ಬಳಿಕ ಇವರೆಲ್ಲರೂ ತಣ್ಣಗಾದರು ಎನ್ನಲಾಗಿದೆ.