More

    ಮಹಾ ಶಿವರಾತ್ರಿಯ ಮಹತ್ವ: ವಿಜಯವಾಣಿ ವಿಶೇಷ ಲೇಖನ

    ಅಹಂ ನಿರ್ವಿಕಲ್ಪೋ ನಿರಾಕಾರ ರೂಪೋ
    ವಿಭುತ್ವಾಚ್ಚ ಸರ್ವತ್ರ ಸರ್ವೇಂದ್ರಿಯಾಣಾಮ್ ॥
    ನ ಚಾಸಂಗಂತಂ ನೈವ ಮುಕ್ತಿರ್ನ ಬಂಧಃ
    ಚಿದಾನಂದರೂಪಃ ಶಿವೋಹಂ ಶಿವೋಹಂ ॥

    ಪ್ರತಿಯೊಂದು ದೇವತೆಯ ಆರಾಧನೆಗೆ ಒಂದೊಂದು ವಿಶೇಷ ತಿಥಿ ಇರುತ್ತದೆ. ಹಾಗೆ ಆ ತಿಥಿಗೂ ಆ
    ದೇವತೆಗೂ ಒಂದೊಂದು ವಿಶೇಷ ಸಂಬಂಧವಿರುತ್ತದೆ. ಆದ್ದರಿಂದ ಆಯಾ ತಿಥಿಗಳಲ್ಲಿ ಆಯಾ ದೇವತೆಗಳನ್ನು ಪೂಜಿಸುವುದರಿಂದ ಅವರು ಸಂಪ್ರೀತರಾಗಿ ತಮ್ಮ ಭಕ್ತರಿಗೆ ಬೇಡಿದ ವರಗಳನ್ನು ಕರುಣಿಸುತ್ತಾರೆ.

    ಗಣಪತಿಗೆ ಚತುರ್ಥಿ, ಗೌರಿಗೆ ತದಿಗೆ, ನಾಗನಿಗೆ ಪಂಚಮಿ, ಸುಬ್ರಹ್ಮಣ್ಯನಿಗೆ ಷಷ್ಠಿ, ಸೂರ್ಯನಿಗೆ ಸಪ್ತಮಿ, ಶ್ರೀಕೃಷ್ಣನಿಗೆ ಅಷ್ಟಮಿ, ಶ್ರೀರಾಮನಿಗೆ ನವಮಿ, ಮಹಾವಿಷ್ಣುವಿಗೆ ಏಕಾದಶಿ, ಪಾರಾಯಣಕ್ಕೆ ದ್ವಾದಶಿ, ಆಂಜನೇಯ ಮತ್ತು ನರಸಿಂಹನಿಗೆ ತ್ರಯೋದಶಿ, ದತ್ತಾತ್ರೇಯನಿಗೆ ಪೂರ್ಣಿಮೆ – ಹೀಗೆ ಪ್ರತಿಯೊಂದು ದೇವರಿಗೂ ಒಂದೊಂದು ತಿಥಿಯು ಪ್ರಶಸ್ತ. ಪರಮೇಶ್ವರನ ಆರಾಧನೆಗೆ ಪ್ರಶಸ್ತವಾದ ತಿಥಿ ಎಂದರೆ ಚತುರ್ದಶಿ. ಶುಕ್ಲಪಕ್ಷದಲ್ಲಿ ಚಂದ್ರನ ಕಾಂತಿಯು ದಿನೇ ದಿನೇ ಕ್ಷೀಣಿಸುತ್ತಾ ಬರುತ್ತದೆ. ಕೃಷ್ಣಪಕ್ಷದಲ್ಲಿ ದಿನ ದಿನವೂ ಕತ್ತಲೆಯು ಹೆಚ್ಚುತ್ತಾ ಹೋಗುತ್ತದೆ. ಶುಕ್ಲಪಕ್ಷದ ರಾತ್ರಿಯು ತೇಜೋಮಯವಾಗಿಯೂ ಕೃಷ್ಣಪಕ್ಷದ ರಾತ್ರಿಯು ತಮೋಮಯವಾಗಿ ಇರುತ್ತವೆ.

    ಅಮಾವಾಸ್ಯೆಯ ಹಿಂದಿನ ದಿನವೇ ಚತುರ್ದಶಿ. ಅಮಾವಾಸ್ಯೆಯ ಮಾರನೆ ದಿನವೇ ಶುಕ್ಲಪಕ್ಷದ ಆರಂಭ. ಕೃಷ್ಣಪಕ್ಷದ ಚತುರ್ದಶಿಯ ರಾತ್ರಿ ಕತ್ತಲೆಯ ಪರಮಾವಧಿ. ಇದು ಎರಡು ಮಾಸಗಳ, ಎರಡು ಪಕ್ಷಗಳ, ಎರಡು ತಿಥಿಗಳ, ಎರಡು ದಿನಗಳ ಸಂಧಿಕಾಲವಾಗಿರುವುದರಿಂದ ಅತ್ಯಂತ ಪ್ರಶಸ್ತವಾದ ತಿಥಿ. ಈ ರಾತ್ರಿಯು ಕತ್ತಲೆಯ ಸ್ವರೂಪವಾದ್ದರಿಂದ ನಿಜಕ್ಕೂ ಅಮಂಗಳ, ಅಶುಭ. ಈ ದಿನ ಸಚ್ಚಿದಾನಂದ ಮಂಗಳಸ್ವರೂಪಿಯಾದ, ಸ್ವಯಂ ಜ್ಯೋತಿಸ್ವರೂಪಿಯಾದ ಪರಮೇಶ್ವರನನ್ನು ಪೂಜಿಸುವುದರಿಂದ ಮಂಗಳರಾತ್ರಿ, ಪವಿತ್ರರಾತ್ರಿ, ಶುಭರಾತ್ರಿ ಹಾಗೂ ಶಿವರಾತ್ರಿ ಎಂದೆಲ್ಲಾ ಪ್ರಸಿದ್ಧವಾಗಿದೆ. ಒಂದು ಶಿವರಾತ್ರಿ ವ್ರತವನ್ನು ಆಚರಿಸಿದರೆ ಸಾವಿರ ಏಕಾದಶಿ ವ್ರತಗಳ ಆಚರಿಸಿದಷ್ಟು ಫಲಗಳು ಮತ್ತು ಕಾಶಿಯಲ್ಲಿ ಮುಕ್ತಿ ಪಡೆದ ಪುಣ್ಯಫಲಗಳು ಸಿಗುವುದೆಂದು ಶಿವಪುರಾಣದಲ್ಲಿ ಹೇಳಿದೆ.

    ಈಶ್ವರ ಎಂದರೆ ಶಿವನೇ
    ಈಶ್ವರ ಎಂದರೆ ಒಡೆಯ, ಪ್ರಭು, ರಾಜ, ಸಮರ್ಥ ಎಂದರ್ಥ. ಈ ವಿಶಾಲ ಪ್ರಪಂಚದಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಕ್ಷೇತ್ರದಲ್ಲಿ ಈಶನೇ. ಪ್ರತಿಯೊಂದು ಗ್ರಹವೂ ಈಶನೇ, ಪ್ರತಿಯೊಬ್ಬ ದೇವತೆಯೂ ಈಶನೇ. ಏಕೆಂದರೆ ಅವರಿಗೆಲ್ಲ ಒಂದೊಂದು ರೀತಿಯ ಶಕ್ತಿ, ಸಾಮರ್ಥ್ಯಗಳು ಇದ್ದೇ ಇರುತ್ತದೆ. ಆದರೆ ಈ ದೇವತೆಗಳಾದರೂ ಈಶ್ವರನಲ್ಲ. ಈಶ್ವರ ಎಂದರೆ ಈಶಾನ ಸಮರ್ಥನು ಎಂದರ್ಥ. ನಿರುಪಚರಿತಾದ ನಿರಪೇಕ್ಷವಾದ ಈಶನ ಸಾಮರ್ಥ್ಯವಿರುವುದು ಈಶ್ವರನೊಬ್ಬನಿಗೇ. ಆದ್ದರಿಂದ ಅವನು ‘ಈಶ್ವರ ಎನಿಸುತ್ತಾನೆ.

    ಹರಿ ಹರ ಬ್ರಹ್ಮಾದಿಗಳಿಗೂ ದೇವಾಧಿದೇವತೆಗಳಿಗೂ ಏಕೈಕ ಈಶ್ವರನೆಂದರೆ ಈಶ್ವರನೇ. ಈ ಈಶ್ವರ ಎನ್ನುವ ಪದಕ್ಕೆ ಅನ್ವರ್ಥವಾದ ಪರತತ್ತ್ವ ಎಂದರೆ ಈಶ್ವರನೊಬ್ಬನೇ. ಬೇರೆ ಬೇರೆ ದೇವತೆಗಳು ದೊಡ್ಡವರಾಗಿರಬಹುದು. ಸಿದ್ಧಪುರುಷರಾಗಿರಬಹುದು. ಆದರೆ ಅವರಾರೂ ಈಶ್ವರರಲ್ಲ. ಈಶ್ವರ ಎಂದರೆ ಪರಮೇಶ್ವರ ಒಬ್ಬನೇ. ಈತನು ಇಂದ್ರಿಯಾದಿಗಳನ್ನು, ಚಂಚಲವಾದ ಮನಸ್ಸನ್ನು, ಜರಾ ಮರಣಗಳನ್ನು, ದೇಶ ಕಾಲಗಳನ್ನು ಜಯಿಸಿ, ಸರ್ವಸ್ವತಂತ್ರನಾಗಿ ಮೆರೆಯುತ್ತಿರುವ ಈಶ್ವರ.

    ಶಿವಂ ಭದ್ರಂ ಕಲ್ಯಾಣಂ ಮಂಗಳಂ ಶುಭದಂ ಎಂದಿದೆ ಅಮರಕೋಶ. ಶಿವ ಎಂಬ ಎರಡಕ್ಷರ ಉಚ್ಚರಿಸಿದಾಗ ಅವರವರ ಕೋರಿಕೆಯಂತೆ ಸ್ವರ್ಗ, ಮೋಕ್ಷಗಳನ್ನು ಕರುಣಿಸುವವ ಎಂದು ಶಿವನನ್ನು ವರ್ಣಿಸಲಾಗಿದೆ. ಬ್ರಹ್ಮಾಂಡವೆಲ್ಲಾ ಅಡಕವಾಗಿರುವ ಕಾರಣ ಈತ ಶಿವ, ಮಂಗಳವನ್ನುಂಟು ಮಾಡುವ ಕಾರಣ ಈತ ಶಂಕರ, ಬ್ರಹ್ಮಾಂಡಕ್ಕೆ ಒಡೆಯ ಸರ್ವಜಗದ್ವ್ಯಾಪಿಯಾದ ಕಾರಣ ಈತ ಈಶ್ವರ, ಸಾಂಸಾರಿಕ ತಾಪತ್ರಯ ನಿವಾರಕ, ಪ್ರಳಯ ಸಮಯದಲ್ಲಿ ಎಲ್ಲವನ್ನೂ ಸಂಹಾರ ಮಾಡುವುದರಿಂದ ಈತ ರುದ್ರ, ಸತ್ಯಸ್ವರೂಪನೇ ಶಿವ, ಶುದ್ಧ ಚೈತನ್ಯ ಶಾಂತಸ್ವರೂಪಿ ಶಿವ.

    ಜಗತ್ತೆಲ್ಲವೂ ಶಿವಮಯ ಎಂದಿದೆ ಶಿವಪುರಾಣ
    ಶೇತೇ ಅಸ್ಮಿನ್ ಸರ್ವ ಇತಿ ಶಿವಃ ಅಂದರೆ ಯಾರಲ್ಲಿ ಎಲ್ಲವೂ ಅಡಕವಾಗಿದೆಯೋ ಎಲ್ಲದರಲ್ಲಿ ಯಾರು ಅಡಕವಾಗಿದ್ದಾರೋ ಆತ ಶಿವ ಎಂದು ಹೇಳಲಾಗಿದೆ. ಬ್ರಹ್ಮ, ವಿಷ್ಣು ಸೃಷ್ಟಿ ಸ್ಥಿತಿ ಕಾರ್ಯ ಮಾಡಿದರೆ ಶಿವ ಲಯಕಾರ್ಯ ಮಾಡುವನು. ಶಿವಲಿಂಗ ಶಿವನನ್ನು ಲಿಂಗರೂಪದಲ್ಲಿ ಪೂಜಿಸುವ ಪದ್ಧತಿ ಪ್ರಾಚೀನಕಾಲದಿಂದಲೂ ನಡೆದು ಬಂದಿದೆ. ಈ ಪ್ರಪಂಚವು ಲಿಂಗಮಯವಾಗಿದೆ. ಎಲ್ಲವೂ ಲಿಂಗದಲ್ಲಿಯೇ ಸೇರಿವೆ. ಅಧ್ಯಾತ್ಮಿಗಳ ಅನುಸಾರ ಲಿಂಗತತ್ತ್ವವು ಬಹು ಗಹನವಾದ ಅರ್ಥವನ್ನು ಒಳಗೊಂಡಿದೆ. ಈ ಲಿಂಗವು ರೂಪವೂ ಅಲ್ಲ, ಅರೂಪವೂ ಅಲ್ಲ, ಸಾಕಾರವೂ ಅಲ್ಲ, ನಿರಾಕಾರವೂ ಅಲ್ಲ. ಸಗುಣೋಪಾಸನೆಯಿಂದ ನಿರ್ಗುಣೋಪಾಸನೆಗೆ ಏರಲು ಇದೊಂದು ಸಾಧನವಾಗಿದೆ. ಲಿಂಗ ಎಂಬ ಪದಕ್ಕೆ ಚಿಹ್ನೆ ಎಂಬ ಅರ್ಥವಿದೆ. ಅಂದರೆ ಯಾವುದರಲ್ಲಿ ಎಲ್ಲವೂ ಲೀನವಾಗುವುದೋ ಅದು ಲಿಂಗ ಎಂದು. ಲಿಂಗಗಳಲ್ಲಿ ಅನೇಕ ವಿಧಗಳಿವೆ.

    ಶಿವರಾತ್ರಿ
    ಶಿವನಿಗೆ ಅತ್ಯಂತ ಪ್ರಿಯವಾದ ರಾತ್ರಿ ಶಿವರಾತ್ರಿ. ಪಾರ್ವತಿಯು ಶಿವನನ್ನು ಕುರಿತು ಶಿವರಾತ್ರಿಯ ಬಗ್ಗೆ
    ಪ್ರಶ್ನಿಸಿದಾಗ ಈ ರೀತಿ ಶಿವ ಹೇಳಿರುವನು. ಮಾಘ ಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಯಾರು ತನ್ನನ್ನು ಶ್ರದ್ಧಾಭಕ್ತಿಗಳಿಂದ ಬಿಲ್ವಪತ್ರೆಯಿಂದ ಅರ್ಚಿಸಿ ಉಪವಾಸವನ್ನು ಆಚರಿಸಿ ಜಾಗರಣೆ ಮಾಡುವರೋ ಅವರ ಇಷ್ಟಾರ್ಥಗಳನ್ನು ನೇರವೇರಿಸುವೆನು. ಭಕ್ತರ ಜನನ-ಮರಣದ ಸಂಕೋಲೆಯಿಂದ ಬಿಡುಗಡೆ ಮಾಡುವೆನು ಎಂದು. ನಂತರ ಈ ವಿಷಯ ಭೂಲೋಕಕ್ಕೂ ಹರಡಿ ಶಿವನನ್ನು ಶಿವರಾತ್ರಿ ದಿನ ಪೂಜಿಸಲು ಪ್ರಾರಂಭಿಸಿದರು.

    ಬಿಲ್ವಪತ್ರೆ
    ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಾ ್ಯಯುಧಮ್ ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಮ್ ॥ ಎಂದು ಬಿಲ್ವಾಷ್ಟಕದಲ್ಲಿದೆ. ಶಿವನಿಗೆ ಅತಿ ಪ್ರಿಯವಾದ ಪತ್ರೆ ಎಂದರೆ ಬಿಲ್ವಪತ್ರೆ. ಶಿವನಿಗೆ ಯಾವುದೇ ಪುಷ್ಪ ಅರ್ಪಿಸಲಿ, ಮೂರು ದಳಗಳುಳ್ಳ ಬಿಲ್ವಪತ್ರೆಯನ್ನು ಅರ್ಪಿಸಲೇಬೇಕು. ಈ ಮೂರು ದಳಗಳೂ ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿಗಳ ಪ್ರತೀಕ ಹಾಗೂ ಶಿವನ ಮೂರು ಕಣ್ಣಿನ ಸಂಕೇತ. ಮೂರು ದಳಗಳು ಸತ್ತ್ವ, ರಜಸ್ ಮತ್ತು ತಮಸ್ ಎಂಬ ತ್ರಿಗುಣಗಳನ್ನು ಪ್ರತಿನಿಧಿಸುತ್ತವೆ.

    ಶಿವರಾತ್ರಿಯ ಮೂರು ಕರ್ತವ್ಯಗಳು
    ಪ್ರತಿಯೊಂದು ಹಬ್ಬಕ್ಕೂ ಒಂದೊಂದು ರೀತಿಯ ವ್ರತನಿಯಮಗಳಿವೆ. ವರಸಿದ್ಧಿ ವಿನಾಯಕನಿಗೆ ಕರಿಗಡುಬು. ಶ್ರೀರಾಮ ನವಮಿಗೆ ಪಾನಕ, ಕೋಸಂಬರಿ, ಕೃಷ್ಣ ಜನ್ಮಾಷ್ಟಮಿಗೆ ಚಕ್ಕಲಿ ಕೋಡಬಳೆ, ಯುಗಾದಿಗೆ ಹೋಳಿಗೆ, ಅದೇ ರೀತಿ ಶಿವರಾತ್ರಿಗೂ ನಿಯಮಗಳಿವೆ. ಅವು ಯಾವುವು ಎಂದರೆ ಶಿವಪೂಜೆ, ಜಾಗರಣೆ, ಉಪವಾಸ.
    * ಶಿವಪೂಜೆ – ಶಿವರಾತ್ರಿಯಂದು ತಮ್ಮ ಮನೆಯಲ್ಲಿಯೇ ಶಿವಲಿಂಗವನ್ನು ಇಟ್ಟುಕೊಂಡು ಅದಕ್ಕೆ ಅಭಿಷೇಕ, ಅಷ್ಟೋತ್ತರ, ಸಹಸ್ರನಾಮ ಪೂಜೆಯನ್ನು ಯಥಾಶಕ್ತಿ ಮಾಡುವುದು. ಶಿವರಾತ್ರಿಯ ಸಂಜೆ 6ಕ್ಕೆ ಪೂಜೆ ಪ್ರಾರಂಭಿಸಿ ಮಾರನೆ ದಿನ ಬೆಳಿಗ್ಗೆ 6ರವರೆಗೆ ಜಾವ ಜಾವಗಳಲ್ಲಿ ಶಿವನನ್ನು ಪೂಜಿಸಬೇಕು.
    * ಜಾಗರಣೆ – ಶಿವರಾತ್ರಿ ದಿನ ಶಿವನನ್ನು ಪೂಜಿಸುತ್ತಾ ಶಿವ ಪಂಚಾಕ್ಷರಿ ಮಂತ್ರವನ್ನು ಜಪಿಸುತ್ತಾ ಶಿವನ ಧ್ಯಾನದಲ್ಲಿಯೇ ಮಗ್ನರಾಗಬೇಕು. ಅಂದು ರಾತ್ರಿ ಮಲಗದೆ ಜಾಗ್ರತರಾಗಿ ಶಿವನನ್ನು ಧ್ಯಾನಿಸಬೇಕು.
    * ಉಪವಾಸ – ಶಿವರಾತ್ರಿ ದಿನ ಉಪವಾಸವಿದ್ದು ಬೇಯಿಸಿದ ಆಹಾರವನ್ನು ತಿನ್ನಬಾರದು. ಕೇವಲ ಹಣ್ಣು ಹಾಲು, ಲಘುವಾಗಿ ಉಪಯೋಗಿಸಬೇಕು. ಉಪ ಎಂದರೆ ಹತ್ತಿರ, ವಾಸ ಎಂದರೆ ಇರುವುದು. ಅಂದರೆ ಭಗವಂತನ ಸಮೀಪ ಇರುವುದು. ಮನುಜರೆಲ್ಲರೂ ಶಿವ ಸ್ವರೂಪಿಗಳೇ. ಅಜ್ಞಾನ ಕಳೆದುಕೊಂಡರೆ ಆನಂದ ಸ್ವರೂಪಿ ಶಿವನಾಗುತ್ತಾನೆ. ನಿಜವಾದ ಅರ್ಥದಲ್ಲಿ ಉಪವಾಸ, ಜಾಗರಣೆ ಮತ್ತು ಶಿವಧ್ಯಾನ ಮಾಡಿದರೆ ಜ್ಯೋತಿಸ್ವರೂಪಿ ಶಿವ ನಮ್ಮೊಳಗೇ ಕಾಣಿಸಿ ಶಿವ ಸಾಕ್ಷಾತ್ಕಾರವಾಗುತ್ತದೆ ಎಂದು ಹೇಳಿದ್ದಾರೆ ಶಂಕರಾಚಾರ್ಯರು.

    ದಕ್ಷಿಣಾಮೂರ್ತಿ
    ಶಿವನು ನಟರಾಜನಾಗಿ, ತ್ರಿಪುರಾಂತಕನಾಗಿ, ಕಿರಾತನಾಗಿ ಪ್ರಸಿದ್ಧಿಯಾಗಿರುವನು. ಅದೇ ರೀತಿ ಶಿವ
    ದಕ್ಷಿಣಾಮೂರ್ತಿಯಾಗಿಯೂ ಸುಪ್ರಸಿದ್ಧ. ದಕ್ಷಿಣಾಮೂರ್ತಿ ಎಂದರೆ ದಕ್ಷಿಣ ದಿಕ್ಕಿಗೆ ತಿರುಗಿಕೊಂಡಿರುವವನು ಎಂದರ್ಥ. ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿಕೊಂಡು ನಾಮ ಜಪಾದಿ ಅನುಷ್ಠಾನ ಮಾಡುತ್ತೇವೆ. ಆದರೆ ಶಿವನು ದಕ್ಷಿಣಾಭಿಮುಖವಾಗಿ ಉಪದೇಶಿಸುತ್ತಿರುವುದು ಮೋಕ್ಷಸಾಧನವಾದ ಆತ್ಮಜ್ಞಾನವನ್ನು. ಸನಕ, ಸನಂದನ, ಸನತ್ಕುಮಾರ, ಸನತ್ಸುಜಾತರೇ ಮುಂತಾದ ನಿವೃತ್ತಿಮಾರ್ಗಿಗಳಾದ ಸಂನ್ಯಾಸಿಗಳಿಗೆ ಶಿವನು ಬಾಲದಕ್ಷಿಣಾಮೂರ್ತಿಯಾಗಿ ತೋರಿಕೊಂಡು ಮೌನದಿಂದ ಆತ್ಮಜ್ಞಾನವನ್ನು ಉಪದೇಶಿಸಿದನು. ಆಗ ಆ ಶಿಷ್ಯರ ಸಂಶಯ ಪರಿಹಾರವಾಯಿತು. ದಕ್ಷಿಣಾ ಎಂದರೆ ಜ್ಞಾನ ಎಂಬ ಅರ್ಥವೂ ಇದೆ. ದಕ್ಷಿಣಾಮೂರ್ತಿ ಎಂದರೆ ಜ್ಞಾನಮೂರ್ತಿ ಎಂದರ್ಥ. ಶಿವನು ಜ್ಞಾನಮೂರ್ತಿಯೂ ಆಗಿದ್ದಾನೆ. ಸರ್ವಲೋಕಗಳಿಗೂ ಗುರುವಾಗಿ, ಭವರೋಗಿಗಳಿಗೆ ಜ್ಞಾನವೈದ್ಯನಾಗಿ, ಸಕಲ ವಿದ್ಯೆಗಳಿಗೂ ನಿಧಿಯಾದ ಶಿವನೇ ದಕ್ಷಿಣಾಮೂರ್ತಿಯು. ಈ ದಕ್ಷಿಣಾಮೂರ್ತಿಯನ್ನು ವಿದ್ಯಾರ್ಥಿಗಳು ಪೂಜಿಸಿದರೆ ಒಳ್ಳೆಯ ವಿದ್ಯೆಯನ್ನು ಪಡೆಯಬಹುದು.

    ಶಿವರಾತ್ರಿಯಂದು ಮಾಡಬೇಕಾದ 10 ಅನುಷ್ಠಾನಗಳು
    1. ಆದಿನ ಉಷಃಕಾಲದಲ್ಲಿ ಏಳಬೇಕು. ಏಳುವಾಗಲೇ ಓಂ ನಮಃ ಶಿವಾಯ ಎಂದು ಹೇಳುತ್ತಾ ಏಳಬೇಕು.
    2. ಸ್ನಾನ ಸಂಧ್ಯಾದಿ ನಿತ್ಯಕರ್ಮ ಮಾಡಬೇಕು.
    3. ಮೌನಿಯಾಗಿದ್ದು ಶಿವನನ್ನು ಧ್ಯಾನಿಸಬೇಕು.
    4. ಬೇಯಿಸಿದ ಆಹಾರ ತೆಗೆದುಕೊಳ್ಳಬಾರದು.
    5. ಹಾಲು ಮಜ್ಜಿಗೆ ಹಣ್ಣು ಉಪಯೋಗಿಸಬಹುದು.
    6. ಸಂಜೆ 6ರಿಂದ ಪೂಜೆ ಪ್ರಾರಂಭಿಸಿ ಶಿವನನ್ನು ಪೂಜಿಸಬೇಕು.
    7. ರಾತ್ರಿ ಪೂರ್ತಿ ಎಚ್ಚರ ಇರಬೇಕು.
    8. ನಾಲ್ಕು ಜಾವಗಳಲ್ಲಿ ಶಿವನಿಗೆ ಅಭಿಷೇಕ ಮಾಡಬೇಕು.
    9. ಶಿವ ಪಂಚಾಕ್ಷರೀ ಮಂತ್ರವನ್ನು ನಿರಂತರ ಪಠಿಸಬೇಕು.
    10. ಶಿವರಾತ್ರಿಯ ಮಾರನೆದಿನ ಮತ್ತೆ ಶಿವನನ್ನು ಪೂಜಿಸಿ ಆಹಾರ ತೆಗೆದುಕೊಳ್ಳಬೇಕು.

    ಲೇಖಕರು: ಪ್ರಕಾಶ್‌ ಬಾಬು ಕೆ. ಆರ್, ಮಂಡಗದ್ದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts