ಐಮಂಗಲ: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಅರ್ಧಭಾಗ ಲಾರಿ ಸುಟ್ಟು ಹೋದ ಘಟನೆ ಸೋಮವಾರ ರಾತ್ರಿ ಹೋಬಳಿಯ ಗುಯಿಲಾಳು ಟೋಲ್ಗೇಟ್ ಬಳಿ ನಡೆದಿದೆ.
ದಾವಣಗೆರೆಯಿಂದ ಮೆಕ್ಕೆಜೋಳದ ಚೀಲ ತುಂಬಿಕೊಂಡು ಬೆಂಗಳೂರು ಕಡೆ ಹೊರಟಿದ್ದ ಲಾರಿಗೆ ಹಿಂಬದಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಟೋಲ್ ಬಳಿ ಬರುವಷ್ಟರಲ್ಲಿ ಅರ್ಧದಷ್ಟು ಲಾರಿಗೆ ಆವರಿಸಿದೆ. ಹಿಂಬದಿಯ ನಾಲ್ಕು ಟೈರ್ ಸಂಪೂರ್ಣ ಸುಟ್ಟು ಹೋಗಿದ್ದು, ಕೆಲವು ಮೆಕ್ಕೆಜೋಳದ ಚೀಲಗಳು ಸುಟ್ಟು ಕರಕಲಾಗಿವೆ.
ತಪ್ಪಿದ ಭಾರಿ ಅನಾಹುತ: ಲಾರಿಯ ಡಿಸೇಲ್ ಟ್ಯಾಂಕ್ಗೆ ಏನಾದರೂ ಬೆಂಕಿ ಹೊತ್ತಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು. ಹಿರಿಯೂರಿನ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.