ಬೈಂದೂರು: ಬೈಂದೂರು ಶಿರೂರು ಮೊದಲಾದ ಗ್ರಾಮೀಣ ಭಾಗದಲ್ಲಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯಿಂದ ಸೂಕ್ತ ದಾಖಲೆ ಮತ್ತು ಯಾವುದೇ ಪರವಾನಗಿ ಪಡೆಯದೆ ಅನಧಿಕೃತ ಮೊಬೈಲ್ ಟವರ್ಗಳು ತಲೆ ಎತ್ತುತ್ತಿವೆ. ಶಿರೂರು ಗ್ರಾಮದ ದೊಂಬೆ ಬಳಿ ಜನವಸತಿ ಸ್ಥಳದ ನಡುವೆ ಖಾಸಗಿ ಕಂಪನಿಯೊಂದು ಮೊಬೈಲ್ ಟವರ್ ನಿರ್ಮಿಸುತ್ತಿದ್ದು, ಈಗಾಗಲೇ ಅಡಿಪಾಯದ ಕಾಮಗಾರಿ ಪೂರ್ಣಗೊಂಡಿದೆ.
ಯಾವುದೇ ಪ್ರದೇಶದಲ್ಲಿ ಮೊಬೈಲ್ ಟವರ್ ನಿರ್ಮಿಸಬೇಕಾದರೆ ಟವರ್ ಸ್ಥಾಪನೆಗೆ ಸಾಮಾನ್ಯ ಮಾರ್ಗಸೂಚಿ, ಸ್ಥಳ, ನಿವೇಶನ ರಚನೆ, ಅನುಮೋದಿತ ಯೋಜನೆ ಹಾಗೂ ಮಾಲೀಕತ್ವದ ಪ್ರತಿ ಜತೆಗೆ ರಚನಾತ್ಮಕ ಸ್ಥಿರತೆ ಪ್ರಮಾಣಪತ್ರ, ಗುತ್ತಿಗೆ ಒಪ್ಪಂದ, ವಾಸದ ಪ್ರಮಾಣ ಪತ್ರ, ಟವರ್ ವಿಸ್ತೀರ್ಣ, ಸಿಡಿಲು ನಿರೋಧಕ ತಂತ್ರಜ್ಞಾನ ಅಳವಡಿಕೆ, ಅಗ್ನಿಶಾಮಕ ಇಲಾಖೆ ಪ್ರಮಾಣ ಪತ್ರ ಬೇಕು. ಸಂಬಂಧಪಟ್ಟ ಗ್ರಾಪಂಗಳಿಂದ ಹತ್ತಕ್ಕೂ ಅಧಿಕ ದಾಖಲೆಗಳನ್ನು ನೀಡಿ ಪರವಾನಗಿ ಪಡೆಯಬೇಕು.
ಆದರೆ ಇಲ್ಲಿ ಮಾತ್ರ ಯಾವುದೇ ನಿಯಮ ಪಾಲಿಸಿಲ್ಲ. ಬಹುತೇಕ ಕಡೆ ಸರ್ಕಾರಿ ನಿಯಮ ಪಾಲಿಸದೆ ಸ್ಥಳೀಯ ಗ್ರಾಪಂ ಸದಸ್ಯರು ಅಥವಾ ಅಧಿಕಾರಿಗಳ ಮಾತುಕತೆ ನಡೆಸಿ ಕಾಮಗಾರಿ ನಡೆಸಲಾಗುತ್ತದೆ. ದೊಂಬೆ ಬಳಿ ಈ ರೀತಿ ಕಾಮಗಾರಿ ನಡೆಸಲು ಮುಂದಾಗಿದ್ದು, ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಗ್ರಾಪಂಗೆ ದೂರು ನೀಡಿದ ತಕ್ಷಣ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಾಮಗಾರಿ ನಿಲ್ಲಿಸಿದ್ದಾರೆ.
ಶಿರೂರು ಗ್ರಾಮ ಪಂಚಾಯಿತಿ ಬಳಿ ನಿರ್ಮಾಣವಾಗುತ್ತಿರುವ ಮೊಬೈಲ್ ಟವರ್ ಯಾವುದೇ ಅನುಮತಿ ಪಡೆದಿಲ್ಲ. ಸ್ಥಳೀಯರಿಂದ ಮಾಹಿತಿ ಬಂದ ತಕ್ಷಣ ಕಾಮಗಾರಿ ತಡೆ ಹಿಡಿಯಲಾಗಿದೆ. ದಾಖಲೆಗಳಿಲ್ಲದೆ ಮೊಬೈಲ್ ಟವರ್ ನಿರ್ಮಾಣವಾದರೆ ಟವರ್ಗೆ ಜಾಗ ನೀಡಿದವರು ಬಾಧ್ಯಸ್ಥರಾಗುತ್ತಾರೆ.
– ಮಂಜುನಾಥ ಶೆಟ್ಟಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಪಂ ಶಿರೂರು