ಮುಳಬಾಗಿಲು : ತಾಲೂಕಿನ ದುಗ್ಗಸಂದ್ರ ಹೋಬಳಿ ಹರಪನಾಯಕನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದು, ಇದರಿಂದ ಗ್ರಾಮದಲ್ಲಿನ ಐತಿಹಾಸಿಕ ಕಲ್ಲಿನ ಕೋಟೆ ಬಿರುಕು ಬಿಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕತ್ತಲಾಗುತ್ತಿದಂತೆ ಸ್ಫೋಟಕ ಬಳಿಸಿ ಬೃಹತ್ ಗಾತ್ರದ ಬಂಡೆಗಳನ್ನು ಸಿಡಿಸಲಾಗುತ್ತಿದೆ. ಇದರಿಂದ ಬಿಸೇಗೌಡರು ಕಟ್ಟಿಸಿರುವ ಐತಿಹಾಸಿಕ ಕಲ್ಲಿನ ಕೋಟೆಯ ಕೆಲ ಭಾಗಗಳು ಬಿರುಕು ಬಿಟ್ಟಿವೆ. 250 ವರ್ಷಗಳ ಹಿಂದೆ ಈ ಭಾಗದಲ್ಲಿ ಮಹಾರಾಜ ಸಾಮಂತರಾಗಿದ್ದ ಪಾಳೆಗಾರ ಬಿಸೇಗೌಡ ಆಳ್ವಿಕೆಯಲ್ಲಿ ಹರಪನಾಯಕನಹಳ್ಳಿಯಲ್ಲಿ ಕಟ್ಟಿದ್ದ ಕೋಟೆ ಈಗ ಅಕ್ರಮ ಗಣಿಗಾರಿಕೆಯಿಂದ ಅಪಾಯಕ್ಕೆ ಸಿಲುಕಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಐಸಿಹಾಸಿಕ ಕೋಟೆ ರಕ್ಷಣೆಗೆ ಜಿಲ್ಲಾ ಮತ್ತು ತಾಲೂಕು ಆಡಳಿತ ಗಮನ ಹರಿಸಬೇಕಾಗಿದ್ದು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪೊಲೀಸ್ ಇಲಾಖೆ ಸಹ ಇದನ್ನು ಗಂಭೀರವಾಗಿ ಪರಿಗಣಿಸಿ ಅಕ್ರಮ ಗಣಿಗಾರಿಕೆಗೆ ತಡೆಯೊಡ್ಡಿ ಕೋಟೆ ರಕ್ಷಣೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಈ ಮೊದಲು ಸಣ್ಣ ಪ್ರಮಾಣದಲ್ಲಿ ಬಂಡೆ ಮೇಲೆ ಗಣಿಗಾರಿಕೆ ಮಾಡಲಾಗುತ್ತಿತ್ತು. ಈ ಬಗ್ಗೆ ಪೊಲೀಸ್ ಮತ್ತು ತಾಲೂಕು ಆಡಳಿತಕ್ಕೆ ದೂರು ನೀಡಿಲಾಗಿತ್ತು. ಮತ್ತೆ ಕೆಲ ದಿನಗಳಿಂದ ಗಣೆಗಾರಿಕೆ ಆರಂಭಿಸಿದ್ದಾರೆ. ಈ ಬಗ್ಗೆ ತಾಲೂಕು ಆಡಳಿತಕ್ಕೆ ಮತ್ತೆ ದೂರು ನೀಡಿದ್ದು, ಈಗ ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಎಚ್.ಎಸ್.ಶಶಿಕಿರಣ್, ಬಿಸೇಗೌಡರ ವಂಶಸ್ಥಹರಪನಾಯಕನಹಳ್ಳಿ ಬಳಿ ಅಕ್ರಮ ಗಣಿಗಾರಿಕೆ ಬಗ್ಗೆ ದೂರು ಬಂದಿದ್ದು ಪರಿಶೀಲನೆ ಮಾಡಿ ಲಾರಿಗಳನ್ನು ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ಕೋಟೆ ಇರುವುದರಿಂದ ಇಲ್ಲಿ ಗಣಿಗಾರಿಕೆ ಅವಕಾಶ ನೀಡದಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು.
ಕೆ.ಎನ್.ರಾಜಶೇಖರ್, ತಹಸೀಲ್ದಾರ್ ಮುಳಬಾಗಿಲು