ಇಳಕಲ್ಲ (ಗ್ರಾ): ನಗರದ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಆಯತಪ್ಪಿ ಕೆಳಗೆ ಬಿದ್ದ ಶಿಕ್ಷಕರೊಬ್ಬರ ಮೇಲೆ ಬಸ್ ಗಾಲಿ ಹಾಯ್ದ ಪರಿಣಾಮ ಬುಧವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ಸರ್ಕಾರಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ, ಹುನಗುಂದ ತಾಲೂಕಿನ ಧನ್ನೂರ ಗ್ರಾಮದ ಸುಭಾಷ ಧನ್ನೂರ (40) ಗಾಯಗೊಂಡ ಶಿಕ್ಷಕ. ಇಳಕಲ್ಲ ಬಸ್ ನಿಲ್ದಾಣದಲ್ಲಿ ಕೃಷ್ಣಾಪುರ ಗ್ರಾಮಕ್ಕೆ ಹೋಗುತ್ತಿದ್ದ ಬಸ್ನ್ನು ಹತ್ತಲು ಹೋಗಿ ಆಯಾತಪ್ಪಿ ಬಸ್ ಗಾಲಿ ಕೆಳಗೆ ಬಿದ್ದಿದ್ದಾರೆ. ಒಂದು ಕಾಲು ಮತ್ತು ಒಂದು ಕೈ ಮೇಲೆ ಬಸ್ ಗಾಲಿ ಹಾಯ್ದು ಹೋಗಿದ್ದು, ಅವುಗಳು ಅಪ್ಪಚ್ಚಿಯಾಗಿವೆ. ಕೂಡಲೇ ಗಾಯಗೊಂಡ ಸುಭಾಷ ಅವರನ್ನು 108 ವಾಹನ ಮೂಲಕ ಇಳಕಲ್ಲ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ ಮತ್ತು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.