ರಾಯಬಾಗ: ಗ್ರಾಮೀಣ ಭಾಗದ ಯುವಜನಾಂಗದ ಪ್ರತಿಭೆ ಪ್ರದರ್ಶನಕ್ಕೆ ಐಹೊಳೆ ಗಾಯನ ಸ್ಪರ್ಧೆ ಒಂದು ಅತ್ಯುತ್ತಮ ವೇದಿಕೆಯಾಗಿದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆದರ್ಶ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಐಹೊಳೆ ಗಾಯನ ಪ್ರತಿಭಾ ಪ್ರಶಸ್ತಿ ಸಿಜನ್-7ರ ಆಡಿಷನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಾಸಕ ಡಿ.ಎಂ.ಐಹೊಳೆ ಅವರು ಪ್ರತಿವರ್ಷ ಆಯೋಜಿಸುತ್ತಿರುವ ಐಹೊಳೆ ಗಾಯನ ಸ್ಪರ್ಧೆಯಲ್ಲಿ ಆಯ್ಕೆಯಾದ ಅನೇಕ ಪ್ರತಿಭೆಗಳು ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ. ಅನೇಕ ಪ್ರತಿಭೆಗಳು ಟಿವಿಯಲ್ಲಿ ಬರುವ ಸಂಗೀತ ಕಾರ್ಯಕ್ರಮಗಳಿಗೆ ಆಯ್ಕೆಯಾಗಿದ್ದಾರೆ ಎಂದರು.
ಶಾಸಕ ಡಿ.ಎಂ.ಐಹೊಳೆ ಮಾತನಾಡಿ, ಐಹೊಳೆ ಗಾಯನ ಸ್ಪರ್ಧೆ ಏರ್ಪಡಿಸಲು ಹುಕ್ಕೇರಿ ಶ್ರೀಗಳು ಪ್ರೇರಣೆಯಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ 7ನೇ ವರ್ಷದ ಕಾರ್ಯಕ್ರಮ ನಡೆಯುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಯುವ ಪ್ರತಿಭೆಗಳು ಸದುಪಯೋಗ ಪಡೆದುಕೊಳ್ಳಬೇಕೆಂದರು.
ಜಿಪಂ ಮಾಜಿ ಸದಸ್ಯೆ ಸುಶೀಲಾ ಐಹೊಳೆ, ಮಾಯವ್ವ ಐಹೊಳೆ, ಸದಾಶಿವ ಘೋರ್ಪಡೆ, ಅಣ್ಣಾಸಾಬ ಖೆಮಲಾಪುರೆ,
ಅರುಣ ಐಹೊಳೆ, ಶಿವಾನಂದ ಐಹೊಳೆ, ಬಸವರಾಜ ಡೊಣವಾಡೆ, ಸದಾನಂದ ಹಳಿಂಗಳಿ, ಮಹೇಶ ಕರಮಡಿ, ಎಸ್.ಎಸ್.ಕಾಂಬಳೆ,
ಶಬ್ಬಿರ್ ಡಾಂಗೆ, ಎಂ.ಡಿ.ಆನಂದ, ಶ್ರೀಶೈಲ ಕಾಗಲ, ವಿವೇಕಾನಂದ ಯಮಕನಮರಡಿ ಇತರರು ಇದ್ದರು.