ಮುಂಬೈ: 2023ರ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಯಶಸ್ವಿಯಾಗಿ ಮುಗಿದಿದ್ದು, ಮೊದಲ ನಾಕೌಟ್ ಕಾದಾಟದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಫೈನಲ್ ಸ್ಥಾನಕ್ಕಾಗಿ ಸೆಣಸಾಡಲಿವೆ. ವಾಂಖೆಡೆ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಮ್ಯಾಚ್ ಆರಂಭಕ್ಕೂ ಮುನ್ನವೇ ಪಿಚ್ ಕುರಿತು ದೊಡ್ಡ ಆರೋಪ ಒಂದು ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ನೆದರ್ಲೆಂಡ್ಸ್ ವಿರುದ್ಧ ಪಂದ್ಯವನ್ನು ಆಡಿದ ನಂತರ, ಟೀಮ್ ಇಂಡಿಯಾ ನಿಧಾನಗತಿಯ ಟ್ರ್ಯಾಕ್ ಅನ್ನು ಸಿದ್ಧಪಡಿಸುವಂತೆ ವಾಂಖೆಡೆಯ ಪಿಚ್ ಕ್ಯುರೇಟರ್ ಅನ್ನು ಕೇಳಿದೆ ಎಂದು ಹಲವಾರು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ವಾಂಖೆಡೆ ಪಿಚ್ನಿಂದ ಹುಲ್ಲು ತೆಗೆಯುವಂತೆ ಮುಂಬೈ ಕ್ಯುರೇಟರ್ಗೆ ಭಾರತೀಯ ಮ್ಯಾನೇಜ್ಮೆಂಟ್ ಸೂಚನೆ ನೀಡಿದೆ. ಈ ಬಗ್ಗೆ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಮುಂಬೈ ತಲುಪುವ ಮೊದಲೇ ಭಾರತ ತಂಡದಿಂದ ನಿಧಾನಗತಿಯ ಪಿಚ್ ಸಿದ್ಧಪಡಿಸುವಂತೆ ಸಂದೇಶ ಬಂದಿತ್ತು ಎಂದು ಎಂಸಿಎ ಮೂಲಗಳು ತಿಳಿಸಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಹಬ್ಬದ ಪ್ರಯುಕ್ತ ಬಿಡಲಾಗಿದ್ದ ವಿಶೇಷ ರೈಲು ರದ್ದು; ಪೊಲೀಸರ ಮೇಲೆ ಕಲ್ಲು ತೂರಾಟ
ತವರಿನ ತಂಡಗಳು ತಮಗೆ ಬೇಕಾದಂತೆ ಪಿಚ್ ಅನ್ನು ಸಿದ್ಧಪಡಿಸಲು ಹೇಳುವುದು ಮಾಮೂಲಿ. ಆದರೆ, ಅದು ದ್ವಿಪಕ್ಷೀಯ ಸರಣಿ ಆಗಿದ್ದಾಗ ಮಾತ್ರ. ಇಲ್ಲಿ ನಡೆಯುತ್ತಿರುವುದು ಐಸಿಸಿಯ ವಿಶ್ವಕಪ್ ಟೂರ್ನಿ. ಇದು ಐಸಿಸಿ ಟೂರ್ನಿಯೇ ಹೊರತು ಬಿಸಿಸಿಐ ಟೂರ್ನಿಯಲ್ಲ. ವಿಶ್ವಕಪ್ ಸಮಯದಲ್ಲಿ ಐಸಿಸಿ ತನ್ನದೇ ಆದ ಪಿಚ್ ಕ್ಯುರೇಟರ್ ಅನ್ನು ಹೊಂದಿದೆ. ಇದೀಗ ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡದ ಮ್ಯಾನೇಜ್ಮೆಂಟ್ನ ಒತ್ತಾಯದ ಮೇರೆಗೆ ಮುಂಬೈನ ವಾಂಖೆಡೆ ಪಿಚ್ ಅನ್ನು ಬದಲಾಯಿಸಲಾಗಿದೆ. ಪಿಚ್ನಿಂದ ಹುಲ್ಲು ತೆಗೆದು ಈರೀತಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ.
ವಿಶ್ವಕಪ್ಗೂ ಮುನ್ನ ಭಾರತ ತಂಡ ತನ್ನ ಪಂದ್ಯಗಳನ್ನು ನಿಧಾನಗತಿಯ ಪಿಚ್ಗಳಲ್ಲಿ ನಡೆಸುವಂತೆ ಮನವಿ ಮಾಡಿತ್ತು ಎಂಬ ಸುದ್ದಿಯೂ ಇದೆ. ಏಕೆಂದರೆ ತವರಿನಲ್ಲಿ ನಿಧಾನಗತಿಯ ಪಿಚ್ಗಳಲ್ಲಿ ಟೀಮ್ ಇಂಡಿಯಾ ದಾಖಲೆಗಳು ಉತ್ತಮವಾಗಿವೆ. ಅಲ್ಲದೆ ಸೋಮವಾರ ಮುಂಬೈ ತಲುಪಿದ ನಂತರ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ವಿಶ್ರಾಂತಿ ಕೂಡ ತೆಗೆದುಕೊಳ್ಳದೆ ನೇರವಾಗಿ ಪಿಚ್ ನೋಡಲು ತೆರೆಳಿದ್ದರು. ಅಭ್ಯಾಸ ಅವಧಿ ಮುಗಿದ ನಂತರ ಭಾರತದ ಪಿಚ್ ಕ್ಯುರೇಟರ್ಗೆ ಆ್ಯಂಟಿ ಡ್ಯೂ ಕೆಮಿಕಲ್ ಸಿಂಪಡಿಸುವಂತೆ ಹೇಳಿತ್ತು ಎಂಬ ಸುದ್ದಿ ಕ್ರಿಕೆಟ್ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.