ಮುಂಬೈ: ಕಂಗನಾ ರಣಾವತ್ ಮತ್ತು ತಾಪ್ಸಿ ಪನ್ನು ವಿರುದ್ಧದ ಜಗಳಕ್ಕೆ ಒಂದು ವರ್ಷವಾಗಿದೆ. ಕಳೆದ ವರ್ಷ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಕಂಗನಾ ಮತ್ತು ತಾಪ್ಸಿ ನಡುವೆ ಒಂದು ವಿಷಯಕ್ಕೆ ಜಟಾಪಟ್ಟಿಯಾಗಿತ್ತು. ಆ ನಂತರ ಅವಕಾಶ ಸಿಕ್ಕಾಗಲೆಲ್ಲ ಕಂಗನಾ, ತಾಪ್ಸಿ ಕಾಲೆಳೆಯುತ್ತಲೇ ಇದ್ದರು. ಅಷ್ಟೇ ಅಲ್ಲ, ತಾಪ್ಸಿ, ಒಬ್ಬ ಬಿ-ಗ್ರೇಡ್ ನಟಿ ಎಂದು ಹೀಯಾಳಿಸದ್ದರು.
ಇದನ್ನೂ ಓದಿ: ಬಾಲಿವುಡ್ನ ಇಬ್ಬರು ಮೇರುನಟರ ಆರೋಗ್ಯಸ್ಥಿತಿ ಗಂಭೀರ: ಆಸ್ಪತ್ರೆಗೆ ದಾಖಲು
ಒಂದು ಹಂತದವರೆಗೂ ಕಂಗನಾಗೆ ಜವಾಬು ಕೊಟ್ಟ ತಾಪ್ಸಿ, ಆ ನಂತರ ಮಾತಾಡುವುದನ್ನೇ ನಿಲ್ಲಿಸಿದರು. ಕಂಗನಾ ಏನು ಹೇಳಿದರೂ, ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ಇದ್ದುಬಿಟ್ಟರು. ಟ್ವಿಟರ್ನಲ್ಲಿ ಆಗಾಗ ತಾಪ್ಸಿಯನ್ನು ಎಳೆದು ತರುತ್ತಿದ್ದ ಕಂಗನಾ, ಇದೀಗ ಟ್ವಿಟರ್ನಿಂದ ಹೊರಬಂದಿದ್ದಾರೆ. ಅಷ್ಟೇ ಅಲ್ಲ, ಬಹಳ ದಿನಗಳಿಂದ ಕಂಗನಾ, ತಾಪ್ಸಿ ಕಾಲೆಳೆಯುವುದಕ್ಕೆ ಹೋಗಿಲ್ಲ.
ಕಂಗನಾ ಅವರನ್ನು ತಾಪ್ಸಿ ಏನಾದರೂ ಮಿಸ್ ಮಾಡಿಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆಯನ್ನು ತಾಪ್ಸಿ ಮುಂದೆ ಇಟ್ಟಾಗ, ಅವರು ಏನು ಉತ್ತರಿಸಿದ್ದಾರೆ ಗೊತ್ತಾ? ಕಂಗನಾ ಅಪ್ರಸ್ತುತವಾಗಿದ್ದು, ಆಕೆಯ ಬಗ್ಗೆ ತಾನು ಯಾವತ್ತೂ ಕೇರ್ ಮಾಡುವುದಿಲ್ಲ ಎಂದು ತಾಪ್ಸಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನೆಟ್ಫ್ಲಿಕ್ಸ್ ಕಾರ್ಯಕ್ರಮದಲ್ಲಿ ಬೇರ್ ಗ್ರಿಲ್ಸ್ ಜತೆಗೆ ರಣವೀರ್ ಸಿಂಗ್!
ಈ ಕುರಿತು ಮಾತನಾಡಿರುವ ಅವರು, ‘ನಾನು ಆಕೆಯನ್ನು ಯಾವತ್ತೂ ಮಿಸ್ ಮಾಡಿಕೊಂಡಿರಲಿಲ್ಲ, ಮಾಡಿಕೊಳ್ಳುವುದೂ ಇಲ್ಲ. ಆಕೆ ನನ್ನ ಪಾಲಿಗೆ ಅಪ್ರಸ್ತುತ. ಆಕೆ ಒಬ್ಬ ನಟಿ ಎನ್ನುವುದು ಬಿಟ್ಟರೆ, ನನ್ನ ಜೀವನದಲ್ಲಿ ಆಕೆಗೆ ಯಾವುದೇ ಸ್ಥಾನವಿಲ್ಲ. ಆಕೆಯ ಬಗ್ಗೆ ನನಗೆ ಯಾವುದೇ ಭಾವನೆಗಳಿಲ್ಲ. ಒಳ್ಳೆಯದೂ ಇಲ್ಲ, ಕೆಟ್ಟದ್ದೂ ಇಲ್ಲ. ಒಳ್ಳೆಯದಾಗಲೀ, ಕೆಟ್ಟದ್ದಾಗಲೀ ಭಾವನೆಗಳು ಹೃದಯದಿಂದ ಬರಬೇಕು. ಆದರೆ, ನನ್ನ ಹೃದಯದಲ್ಲಿ ಆಕೆಗೆ ಯಾವುದೇ ಸ್ಥಾನವಿಲ್ಲ. ಆಕೆಗೆ ಯಾವತ್ತೂ ಕೇರ್ ಮಾಡಿಲ್ಲ, ಮಾಡುವುದೂ ಇಲ್ಲ’ ಎಂದು ತಾಪ್ಸಿ ಹೇಳಿಕೊಂಡಿದ್ದಾರೆ.