ಹಾವೇರಿ: ಮಳೆಯು ಇಲ್ಲದೇ, ಬೆಳೆಯೂ ಇಲ್ಲದೇ ಬರಗಾಲಕ್ಕೆ ಸಿಲುಕಿರುವ ರೈತರ ಆರ್ಥಿಕ ಪರಿಸ್ಥತಿ ತುಂಬಾ ಹದಗೆಟ್ಟಿದೆ. ಇದರಿಂದ ನೊಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಕೂಡಲೇ ಮಧ್ಯಂತರ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 10 ದಿನಗಳಲ್ಲಿ ಪ್ರತಿ ಎಕರೆಗೆ ತಲಾ 25 ಸಾವಿರ ರೂ.ನಂತೆ ಮಧ್ಯಂತರ ಬರ ಪರಿಹಾರ ನೀಡುವುದಾಗಿ ಹೇಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತು ಮರೆತಿದ್ದಾರೆ. ಏಳರಿಂದ ಹತ್ತು ತಾಸಿನವರೆಗೆ ರೈತರ ಪಂಪಸೆಟ್ಗಳಿಗೆ ವಿದ್ಯುತ್ ಒದಗಿಸುವ ಬೇಡಿಕೆ ರೈತರಲ್ಲಿದೆ. ಆದರೆ, ಮುಖ್ಯಮಂತ್ರಿಯವರು ಕೇವಲ ಐದು ಗಂಟೆ ನಿರಂತರ ವಿದ್ಯುತ್ ಕೊಡಿ ಎನ್ನುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಕೃಷಿ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದಿದ್ದ ಮುಖ್ಯಮಂತ್ರಿ ಅದನ್ನೂ ಮರೆತಿದ್ದಾರೆ. ಗ್ಯಾರಂಟಿಗಾಗಿ ಹಣ ಕ್ರೋಢೀಕರಣಕ್ಕಾಗಿ ತಡಮಾಡಬೇಡಿ. ಕಾಯ್ದೆ ವಾಪಸ್ ಪಡೆಯಲು ಹಣ ಬೇಕಾಗಿಲ್ಲ. ಇದರಿಂದ ಅನಾನುಕೂಲಗಳೇ ಹೆಚ್ಚಾಗುತ್ತಿವೆ. ಇದ್ದ ಬೆಳೆ ಕಟಾವು ಮಾಡಲಾಗುತ್ತಿಲ್ಲ. ಗ್ರಾಪಂಗಳು ಸರಿಯಾಗಿ ನರೇಗಾ ಕೆಲಸ ಕೊಡುತ್ತಿಲ್ಲ. ಇದರಿಂದ ಜನ ಗುಳೆ ಹೋಗುವಂತಾಗಿದೆ. ಎಲ್ಲರಿಗೂ ಭಾಗ್ಯ ಕೊಟ್ಟು ರೈತರಿಗೆ ಮಾತ್ರ ದೌರ್ಭಾಗ್ಯ ಕೊಟ್ಟಿರುವ ಸರ್ಕಾರಕ್ಕೆ ದಿಕ್ಕಾರ ಎಂದರು.
ಹಾನಗಲ್ಲ ತಾಲೂಕು ಅಧ್ಯಕ್ಷ ರುದ್ರಪ್ಪ ಬಳಿಗಾರ, ಸವಣೂರ ತಾಲೂಕು ಅಧ್ಯಕ್ಷ ರಮೇಶ ದೊಡ್ಡೂರ, ಶಿಗ್ಗಾಂವಿ ತಾಲೂಕು ಅಧ್ಯಕ್ಷ ಆನಂದ ಕೆಳಗಿನಮನಿ, ಟಿ.ಡಿ.ಬಸವರಾಜ, ಶಂಕರಗೌಡ ಪಾಟೀಲ, ಮತ್ತಿತರರು ಇದ್ದರು.