ಹೂವಿನಹಡಗಲಿ: ಪಟ್ಟಣದಲ್ಲಿ ಹಿಂದು-ಮುಸ್ಲಿಂ ಭಾವೈಕ್ಯತೆ ಸಂಕೇತವಾದ ಯಮನೂರು ಸ್ವಾಮಿ ರಾಜಬಾಗ್ ಸವಾರ್ ಉರುಸ್ ನಿಮಿತ್ತ ಗುರುವಾರ ರಾತ್ರಿ ಗಂಧ ಮಹೋತ್ಸವ ಸರಳವಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ಹಜರತ್ ಸೈಯದ್ ತಾಜುದ್ದೀನ್ ಬಾಬಾ (ಯಮನೂರು ಸ್ವಾಮಿ) ಸೌಹಾರ್ದ ಯಾತ್ರೆ ವೇಳೆ ಪಟ್ಟಣದ ದರ್ಗಾ ಬಳಿ ಉಳಿದು ಹೋಗಿದ್ದರು. ಇಂತಹ ಪುಣ್ಯದ ಭೂಮಿಯಲ್ಲಿರುವ ನಾವೇ ಧನ್ಯರು. ಎಲ್ಲರೂ ಒಗ್ಗಟ್ಟಾಗಿ ಬಾಳಬೇಕು ಎಂದರು.
ಪುರಸಭೆ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್, ವಕೀಲರಾದ ಎಸ್.ಎಚ್.ಛಬ್ಬಿ, ಅಟವಾಳಗಿ ಕೊಟ್ರೇಶ್, ಶ್ರೀನಿವಾಸ್ ರೆಡ್ಡಿ, ಪಾಟೀಲ್ ಬಸವನಗೌಡ, ಉರುಸ್ ಕಮಿಟಿ ಪದಾಧಿಕಾರಿಗಳು ಇದ್ದರು.
ಗಂಧ ಮಹೋತ್ಸವ ದಿನದಂದು ಬೆಳಗಿನ ಜಾವ 4.30ಕ್ಕೆ ಕುಂಬಾರರ ಮನೆಯಿಂದ ತಂದ ಹೊಸ ಮಡಿಕೆಯಲ್ಲಿ ಪಟ್ಟಣ ಹೊರ ವಲಯದ ಹಳ್ಳದ ನೀರು ತಂದು ಯಮನೂರು ಸ್ವಾಮಿ ಪವಾಡ ಪೀಠದ ಮುಂದೆ ಇರಿಸಿ ಮಡಿಕೆ ನೀರಿನಿಂದಲೇ ದೀಪ ಹಚ್ಚಲಾಯಿತು. ಭಕ್ತರು ಮಾಸ್ಕ್ ಧರಿಸಿ ದೈಹಿಕ ಅಂತರ ಪಾಲನೆಯೊಂದಿಗೆ ದೇವರ ದರ್ಶನ ಪಡೆದರು. ಕರೊನಾ ಕಾರಣ ಈ ಬಾರಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು ಹಾಕಲು ಅವಕಾಶ ನೀಡಿರಲಿಲ್ಲ.