ಹೂವಿನಹಡಗಲಿ: ಕೇಂದ್ರ ಸರ್ಕಾರ ಇಡಿ ಹಾಗೂ ಸಿಬಿಐಗಳನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ವೈಷ್ಯಮ್ಯದಿಂದಾಗಿ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಇಡಿ ಮೂಲಕ ವಿಚಾರಣೆ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಆರೋಪಿಸಿದರು. ರಾಹುಲ್ ಗಾಂಧಿಗೆ ಇಡಿ ಜಾರಿ ಮಾಡಿರುವ ವಿಚಾರಣೆಯನ್ನು ವಿರೋಧಿಸಿ ಸೋಮವಾರ ಹೂವಿನಹಡಗಲಿ ಕಾಂಗ್ರೆಸ್ನಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ನೇತೃತ್ವದಲ್ಲಿ ಪ್ರಾರಂಭಗೊಂಡಿರುವ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ದೇಶದ ಮಹತ್ತರ ಉದ್ದೇಶದಿಂದ ಪ್ರಾರಂಭವಾಗಿದ್ದು, ಬ್ರಿಟಿಷರ ವಿರುದ್ಧವಾಗಿ ಅವರ ಆಡಳಿತ ವೈಖರಿ ತಿಳಿಸುವುದಾಗಿತ್ತು. ಇಂತಹ ಮಹತ್ತರ ಉದ್ದೇಶದಿಂದ ಪ್ರಾರಂಭಗೊಂಡಿರುವ ಪತ್ರಿಕೆಯ ಹಣವನ್ನು ಯಾವುದೇ ಕಾರಣಕ್ಕೂ ರಾಹುಲ್ ಗಾಂಧಿ ದುರುಪಯೋಗ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ರಾಹುಲ್ ಗಾಂಧಿಯವರ ರಾಜಕೀಯ ಶಕ್ತಿ ಕುಂದಿಸುವ ಹುನ್ನಾರದಿಂದ ಅವರ ಮೇಲೆ ನರೇಂದ್ರ ಮೋದಿ ಇಡಿ ವಿಚಾರಣೆ ನೋಟಿಸ್ ಜಾರಿ ಮಾಡಿಸಿದ್ದಾರೆ. ಇದರಿಂದಾಗಿ ರಾಹುಲ್ ಗಾಂಧಿಯವರ ರಾಜಕೀಯ ಶಕ್ತಿ ಯಾವುದೇ ಕಾರಣಕ್ಕೂ ಕುಂದುವುದಿಲ್ಲ ಎಂದರು.
ಮುಖಂಡರಾದ ಬ್ಯಾಲಹುಣಸಿ ಬಸವನಗೌಡ್, ಬಿ.ಹನುಮಂತಪ್ಪ, ಎಲ್.ಚಂದ್ರನಾಯ್ಕ, ಅಟವಾಳಗಿ ಕೊಟ್ರೇಶ್, ಜಿ. ವಸಂತ ತಿಪ್ಪಾಪುರ ಬೀರಪ್ಪ, ಯುವ ಘಟಕದ ಪದಾಧಿಕಾರಿಗಳು ಇದ್ದರು.