ಹೂವಿನಹಿಪ್ಪರಗಿ: ದೇವರಹಿಪ್ಪರಗಿ ಮತಕ್ಷೇತ್ರದ 128 ಗ್ರಾಮ ಹಾಗೂ ತಾಂಡಾಗಳಲ್ಲಿ ಒಟ್ಟು 200 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಇದರಿಂದ ಕ್ಷೇತ್ರ ಅಭಿವೃದ್ಧಿ ಪಥದತ ಸಾಗಿದೆ ಎಂದು ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿದರು.
ಸಮೀಪದ ವಡವಡಗಿ ಗ್ರಾಮದಲ್ಲಿ ಲೆಕ್ಕ ಶೀರ್ಷಿಕೆ ಯೋಜನೆಯಡಿ 2.5 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಾನು ಕ್ಷೇತ್ರದ ಶಾಸಕನಾಗಿ ಆಯ್ಕೆಯಾದ ಕೆಲ ದಿನಗಳು ಮೈತ್ರಿ ಸರ್ಕಾರದ ಅಧಿಕಾರದಲ್ಲಿತ್ತು. ಆಗ ನನ್ನ ಕ್ಷೇತ್ರಕ್ಕೆ ದೊರೆತ ಅನುದಾನ ಕೇವಲ 15 ಕೋಟಿ ರೂ., ನಂತರ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ 200 ಕೋಟಿ ರೂ.ಗಿಂತಲೂ ಅಧಿಕ ಅನುದಾನ ಬಿಡುಗಡೆಗೊಳಿಸಿದ್ದಾರೆ. ಈ ಹಿಂದೆ ಎಂದೂ ಕಾಣದ ಅಭಿವೃದ್ಧಿಯನ್ನು ನಮ್ಮ ಕ್ಷೇತ್ರ ಕಾಣುತ್ತಿದೆ ಎಂದರು.
ವಡವಡಗಿ ಗ್ರಾಮಕ್ಕೆ ಸಾಸನೂರ ವಡವಡಗಿ ರಸ್ತೆ ಸುಧಾರಣಗೆ 4 ಕೋಟಿ ರೂ., ಗ್ರಾಮದ ಸಿಸಿ ರಸ್ತೆ ಸುಧಾರಣೆಗೆ 2.75 ಕೋಟಿ ರೂ., ವಡವಡಗಿ ತಾಂಡಾಕ್ಕೆ 10 ಲಕ್ಷ ರೂ., ಸಿಸಿ ರಸ್ತೆಗೆ ಹಣ ಬಿಡುಗಡೆಯಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆ ಜಾರಿಗೊಳಿಸಲು ಸರ್ಕಾರಕ್ಕೆ ಒತ್ತಾಯಿಸಲಾಗಿದ್ದು, ಶೀಘ್ರ ಅನುಷ್ಠಾನಗೊಳ್ಳಲಿದೆ. ಇದರಿಂದ ಕ್ಷೇತ್ರದ 52 ಸಾವಿರ ಎಕರೆ ಜಮೀನು ನೀರವರಿಗೊಳಪಡಲಿದೆ. ನಮ್ಮೂರ ನಮ್ಮ ರಸ್ತೆ ಕೂಡು ದಾರಿಗಳ ಸುಧಾರಣೆಗೂ ಪ್ರಥಮ ಆದ್ಯತೆ ನೀಡಿದ್ದೇನೆ ಎಂದರು.
ಸಂಕನಾಳ ಬಳಿ ನಿರ್ಮಿಸುತ್ತಿರುವ ಕಾಲುವೆಗೆ 17 ಕೋಟಿ ರೂ. ವೆಚ್ಚದಲ್ಲಿ 9.5 ಕಿ.ಮೀ. ಕಾಲುವೆ ನಿರ್ಮಾಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು ಅತಿ ಶೀಘ್ರ ಕಾಮಗಾರಿ ಪೂರ್ಣಗೊಳ್ಳಲಿದೆ. ಕ್ಷೇತ್ರದಲ್ಲಿನ ಕೆರೆ ತುಂಬುವ ಯೋಜನೆಗೆ 19.50 ಕೋಟಿ ರೂ. ವೆಚ್ಚದ ಯೋಜನೆಗೆ ಸರ್ಕಾರಕ್ಕೆ ಕಳುಹಿಸಿದ ಪ್ರಸ್ತಾವನೆಗೆ ಅನುಮೋದ ನೀಡಿದ್ದು, ಶೀಘ್ರ ಕಾಮಗಾರಿ ಟೆಂಡರ್ ಹಂತಕ್ಕೆ ತಲುಪಿದೆ ಎಂದು ತಿಳಿಸಿದರು.
ಕೆಆರ್ಡಿಐಎಲ್ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ತಿಮ್ಮರಾಜಪ್ಪ ಮಾತನಾಡಿ, ವಡವಡಗಿ ಗ್ರಾಮದಲ್ಲಿ 2.50 ಕೋಟಿ ರೂ. ವೆಚ್ಚದ 3 ವಿವಿಧ ಕಾಮಗಾರಿಗಳು ಆರಂಭಗೊಂಡಿವೆ. ಆ ಎಲ್ಲ ಕಾಮಗಾರಿಗಳನ್ನು ಸುಸಜ್ಜಿತವಾಗಿ ನಿರ್ಮಿಸಿ ಕೊಡುತ್ತೇವೆ. ಅದಕ್ಕೆ ಗ್ರಾಮಸ್ಥರು ಸಹಕಾರ ನೀಡುವಂತೆ ಮನವಿ ಮಾಡಿದರು. ವಡವಡಗಿಯ ಬ್ರುಂಗೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಗ್ರಾಪಂ ಉಪಾಧ್ಯಕ್ಷ ಬಸವರಾಜ ಡೆಂಗಿ, ತಾಪಂ ಸದಸ್ಯ ಮಲ್ಲು ತಳವಾರ, ಬಿಜೆಪಿ ಮಂಡಲ ಅಧ್ಯಕ್ಷ ಭೀಮನಗೌಡ ಸಿದರೆಡ್ಡಿ, ಸಂಗನಗೌಡ ಧನ್ನೂರ, ಶಿವಣ್ಣ ಬ್ಯಾಕೋಡ, ಗುರಬಸಪ್ಪ ಸಜ್ಜನ, ಮೋದಿನಸಾ ಬಾಗವಾನ, ಮುಖಂಡ ಸಾಹೇಬಗೌಡ ಪಾಟೀಲ, ಸಾಸನೂರ ರಾಮನಗೌಡ ನಾವದಗಿ, ಮಂಜುನಾಥಗೌಡ ಹೊಸಗೌಡರ, ಮಹಾದೇವಪ್ಪ ಪಾಟೀಲ, ಸಿ. ಎಸ್. ಬಿರಾದಾರ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ ಮತ್ತಿತರರಿದ್ದರು.