ಹೂವಿನಹಡಗಲಿ: ತಾಲೂಕಿನ ಬಗರ್ ಹುಕುಂ, ಆಕ್ರಮ-ಸಕ್ರಮ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಣೆ ಮಾಡುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ಮುಖಂಡರು ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಿಸಾನ್ ಸಭಾ ಜಿಲ್ಲಾ ಸಂಚಾಲಕ ಸುರೇಶ ಹಲಗಿ ಮಾತನಾಡಿ, ತಾಲೂಕಿನಲ್ಲಿ ಅತಿ ಮಳೆಯಿಂದ ರೈತರ ಫಸಲು ಹಾಳಾಗಿದೆ. ಬೆಳೆಗಳಿಗೆ ವೈಜ್ಞಾನಿಕ ಬೆಲೆಯ ಪರಿಹಾರ ಕೊಡಬೇಕು. 3,500ಕ್ಕೂ ಹೆಚ್ಚು ರೈತರು ಅಕ್ರಮ-ಸಕ್ರಮದಡಿ ಭೂಮಿ ಸಾಗುವಳಿ ಮಾಡುತ್ತಿದ್ದಾರೆ. ಆದರೆ ಸರ್ಕಾರ ಇದುವರೆಗೂ ಹಕ್ಕುಪತ್ರ ನೀಡಿಲ್ಲ. ರೈತರ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ತಹಸೀಲ್ದಾರ್ ಎ.ಎಚ್.ಮಹೇಂದ್ರಗೆ ಮನವಿ ಸಲ್ಲಿಸಲಾಯಿತು.